ಏಡ್ಸ್ ಕಾಯಿಲೆ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸೋಂಕಿತರಿಗೆ ಮಾನಸಿಕ ಹಾಗೂ ದೈಹಿಕವಾಗಿ ಧೈರ್ಯ ತುಂಬುವುದೇ ದಿನಾಚರಣೆಯ ಮೂಲ ಉದ್ದೇಶ ಎಂದು ಚಿಕ್ಕಮಗಳೂರು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮ ಅವರು ಹೇಳಿದರು.
ಚಿಕ್ಕಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಏಡ್ಸ್ ಎಂಬುದು ಮಾರಣಾಂತಿಕವಲ್ಲ. ಸೂಕ್ತ ಮತ್ತು ನಿಯಮಿತ ಚಿಕಿತ್ಸೆಯಿಂದ ನಿಯಂತ್ರಿಸ ಬಹುದು.
ಹೆಚ್.ಐ.ವಿ. ಪೀಡಿತರನ್ನು ಎಲ್ಲರಂತೆ ಕಾಣಬೇಕು. ಏಡ್ಸ್ ಬಗ್ಗೆ ಇರುವ ಮೌಡ್ಯವನ್ನು ಮಟ್ಟ ಹಾಕುವ ದಿನವಾಗಿದೆ. ಸೋಂಕಿನ ಕುರಿತಾದ ಅರಿವಿನಿಂದ ಇದನ್ನು ದೂರ ಇರಿಸಬಹುದು ಎಂದು ಸಲಹೆ ಮಾಡಿದರು.
ಹೆಚ್.ಐ.ವಿ.ಯಿಂದ ಬಳಲುತ್ತಿರುವವರಿಗೆ ಸಮಾಜದ ನಾಗರೀಕರು ಅಸಭ್ಯ ವರ್ತನೆ ನಡೆಸದೇ ಸಹನೆಯಿಂದ ನಡೆದುಕೊಳ್ಳಬೇಕು. ಕಾಯಿಲೆಯ ಬಗ್ಗೆ ಅವರಲ್ಲಿ ಯಾವ ಅಳಕು ಬಾರದ ರೀತಿಯಲ್ಲಿ ನಾಗರೀಕರು ವರ್ತಿಸಿದರೆ ಸಮಾಜದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಾಗೃಹ ಅಧೀಕ್ಷಕ ಶ್ರೀಶೈಲ ಎಸ್.ಮೇಟಿ ಹೆಚ್.ಐ.ವಿ. ಸೋಂಕಿಗೆ ಒಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ಧೈರ್ಯ ತುಂಬುವ ಸಂಕಲ್ಪ ಮಾಡುವ ಮಹತ್ವದ ದಿನವಾಗಿದೆ. ಆ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿ ಹೆಚ್ಐವಿ ಸೆಂಟರ್ ಸ್ಥಾಪಿಸಿ ಪ್ರತಿಯೊಬ್ಬರಿಗೂ ರಕ್ತಪರೀಕ್ಷೆ ನಡೆಸಿ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡ್ಯಾಪ್ಕೋ ಜಿಲ್ಲಾ ಮೇಲ್ವಿಚಾರಕ ಆರ್.ಪ್ರಭುಕುಮಾರ್, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಸಂಯೋಜಕ ಕಿರಣಕುಮಾರ್, ಕಾರಾಗೃಹ ಮಾನಸಿಕ ಆಪ್ತ ಸಮಾಲೋಚಕಿ ಎ.ಆಶಾ, ಎಸ್.ವಿ.ವೈ.ಎಂ.ನ ರಾಜುನರಸಯ್ಯ, ಪ್ರವೀಣಕುಮಾರ್ ಡಿ.ಅಂಗಡಿ, ಕಾರಾಗೃಹ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.