ಭಾರತೀಯ ಸೇನೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಸುಪ್ರೀಂಕೋರ್ಟ್ ನೀಡಿದ ಎಚ್ಚರಿಕೆಗೆ ಮಣಿದ ಸೇನೆಯು , ಎಲ್ಲಾ ಅರ್ಹ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗದ ಅನ್ವಯ ಕಾಯಂ ಹುದ್ದೆ ನೀಡುವುದಾಗಿ ತಿಳಿಸಿದೆ.
ಸೇನಾಧಿಕಾರಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ‘ವುಮೆನ್ ಶಾರ್ಟ್ ಸರ್ವಿಸ್ ಕಮಿಷನ್’ ಅಧಿಕಾರಿಗಳಿಗೆ ಕಾಯಂ ನೇಮಕಾತಿ ನೀಡುವಂತೆ ಲೆಫ್ಟಿನೆಂಟ್ ಕರ್ನಲ್ ನಿತಿಶಾ ಪ್ರಕರಣದಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ. ಎಸ್. ಬೋಪಣ್ಣ ಅವರಿದ್ದ ದ್ವಿಸದಸ್ಯ ಪೀಠವು, ಅರ್ಜಿಯ ವಿಚಾರಣೆಯನ್ನು ನಡೆಸಿತ್ತು.
ನಂತರ ಹತ್ತು ದಿನಗಳ ಒಳಗಾಗಿ 11 ಮಹಿಳಾ ಅಧಿಕಾರಿಗಳ ಸೇವೆ ಕಾಯಂಗೊಳಿಸಬೇಕು ಎಂದು ಆದೇಶಿಸಿತ್ತು. ಆದರೆ, ತನ್ನ ಆದೇಶವನ್ನು ಕಡೆಗಣಿಸುತ್ತಿರುವುದು ಮತ್ತು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ತನ್ನ ಸುಪರ್ದಿಯಲ್ಲಿ ಭಾರತೀಯ ಸೇನೆ ಅಗ್ರಸ್ಥಾನ ಇರಬಹುದು. ಆದರೆ ಸಾಂವಿಧಾನಿಕ ವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಸರ್ವೋಚ್ಛ ಎನ್ನುವುದನ್ನು ಮರೆಯದಿರಿ.ಈಗಾಗಲೇ ಮಹಿಳಾ ಅಧಿಕಾರಿಗಳ ಖಾಯಂ ನೇಮಕಾತಿಗೆ ಸಾಕಷ್ಟು ಅವಧಿಯನ್ನು ಸರ್ಕಾರಕ್ಕೆ ಮತ್ತು ಭಾರತೀಯ ಸೇನೆಗೆ ಕೋರ್ಟ್ ನೀಡಿದೆ. ನೇಮಕಾತಿ ಸಂಬಂಧ ಇನ್ನೂ ಕೂಡ ಕೋರ್ಟ್ ಮೆಟ್ಟಿಲು ಏರದೇ ಇರುವವರು, ಸೇನೆಯ ಅರ್ಹತಾ ಮಾನದಂಡ ಪೂರೈಸಿದ್ದಲ್ಲಿ ಅವರಿಗೂ ಕೂಡ ಖಾಯಂ ನೇಮಕಾತಿ ಕಲ್ಪಿಸಬೇಕು. ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆಯು ಸುಪ್ರೀಂ ಆದೇಶ ಉಲ್ಲಂಘಿಸಿ ನಿಂದನೆಗೆ ಗುರಿಯಾಗುವ ಹಠಮಾರಿತನ ಪ್ರದರ್ಶಿಸಲ್ಲ ಎಂಬ ವಿಶ್ವಾಸವಿದೆ” ಎಂದು ನ್ಯಾ. ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ.