ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೆಲಸವನ್ನು ಡಾ. ರಾಜಕುಮಾರ್ ಕುಟುಂಬ ಹಿಂದಿನಿಂದಲೂ ರೂಪಿಸಿಕೊಂಡು ಬಂದಿದೆ. ಇತ್ತೀಚಿಗೆ ಕನ್ನಡ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಇಡೀ ದೇಶವೇ ದಿಗ್ಭ್ರಮೆಗೆ ಒಳಗಾಗಿದ್ದರೂ ಸಹ ಅವರ ಮರಣದ ನಂತರ ನೇತ್ರದಾನ ಮಾಡುವ ಮೂಲಕ ನಾಲ್ವರು ಅಂಧರ ಬಾಳಲ್ಲಿ ಬೆಳಕು ಮೂಡಿತು. ಈಗ ಪುನೀತ್ ಅವರ ಕಣ್ಣಿನಿಂದ ಇದೇ ಮೊದಲ ಬಾರಿಗೆ ಹತ್ತು ಜನಕ್ಕೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯದ ವೈದ್ಯರು ಮುಂದಾಗಿದ್ದಾರೆ.
ಪ್ರಥಮಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯ ಹಾಗೂ ಸ್ಟೆಮ್ ಸೆಲ್ ಎರಡನ್ನು ಬಳಸಿ ಅಂದರಿಗೆ ದೃಷ್ಟಿ ನೀಡುವ ಪ್ರಯತ್ನಕ್ಕೆ ನಾರಾಯಣ ನೇತ್ರಾಲಯ ಮುಂದಾಗುವ ಮೂಲಕ ರಾಜ್ಯದಲ್ಲೇ ಹೊಸ ದಾಖಲೆ ಸೃಷ್ಟಿಸುವಲ್ಲಿ ಮುಂದಾಗಲಿದೆ.
ಏನಿದು ಸ್ಟೆಮ್ ಸೆಲ್ ?
ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಬಂದ ನಾರಾಯಣ ನೇತ್ರಾಲಯ ಡಾ.ಭುಜಂಗ ಶೆಟ್ಟಿ ಅವರು ಪುನೀತ್ ಅವರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದರು.
ಪುನೀತ್ ಅವರ ಕಣ್ಣಿನ ಬಿಳಿ ಗುಡ್ಡೆಯಿಂದ ತೆಗೆಯಲಾದ ಸ್ಟೆಮ್ ಸೆಲ್ ಗಳನ್ನು ಸಂಗ್ರಹಿಸಿ ಲ್ಯಾಬೋರೇಟರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸ್ಟೆಮ್ ಸೆಲ್ ಗಳು ಮಲ್ಟಿಪಲ್ ಆಗುತ್ತಿವೆ. ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯುತ್ತಿದ್ದು, ಸ್ಟೆಮ್ ಸೆಲ್ ಗಳು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾದ ಬಳಿಕ ಸ್ಟೆಮ್ ಸೆಲ್ ನಿಂದ ದೃಷ್ಟಿ ಕಳೆದುಕೊಂಡಿದ್ದ ಅಂದರಿಗೆ ಕಸಿ ಮಾಡಬಹುದಾಗಿದೆ.
ಪಟಾಕಿ ಸಿಡಿತದಿಂದಾಗಿ ಅಥವಾ ವಂಶವಾಹಿನಿಯಿಂದಾಗಿ ಹಲವರಲ್ಲಿ ಅಂಧತ್ವ ಸಮಸ್ಯೆ ಇರುತ್ತದೆ. ಅಂತವರಿಗೆ ಸ್ಟೆಮ್ ಸೆಲ್ ಅಳವಡಿಕೆ ಮಾಡುವುದರಿಂದ ದೃಷ್ಟಿ ನೀಡಲು ಸಾಧ್ಯವಿದೆ ಹಾಗೂ ಪುನೀತ್ ರಾಜಕುಮಾರ್ ಅವರ ಸ್ಟೆಮ್ ಸೆಲ್ ಗಳನ್ನು 10 ದಿನದಲ್ಲಿ 10ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ನೀಡುವ ಪ್ರಯತ್ನ ಯಶಸ್ವಿಯಾದರೆ ರಾಜ್ಯದ ಮಟ್ಟಿಗೆ ಇದು ಹೊಸ ದಾಖಲೆಯಾಗಲಿದೆ ಎಂದು ಡಾ.ಭುಜಂಗ ಶೆಟ್ಟಿ ತಿಳಿಸಿದರು.