ಭಾರತ ವಿಶ್ವದಲ್ಲೇ ಅತಿದೊಡ್ಡ ಕ್ಯಾನ್ಸರ್ ಹಬ್ ಆಗಿ ಬೆಳೆಯುತ್ತಿರುವುದಕ್ಕೆ ತಂಬಾಕು ಸೇವನೆ ಮತ್ತು ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆ ಕಾರಣ.
ಕಾನೂನು ಜಾರಿಯಾದರೂ ಸಾರ್ವಜನಿಕರಲ್ಲಿ ಇವುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಇಲ್ಲದಿದ್ದರೆ ನಿಯಂತ್ರಣ ಕಷ್ಟ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಶಾಲೆ- ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಜಾಸ್ತಿಯಿದೆ. ಮಾರಾಟಗಾರರು ಚಿಕ್ಕಮಕ್ಕಳಿಗೆ ಹಣದ ಆಮಿಷವೊಡ್ಡಿ ಅವರ ಮೂಲಕ ಗಾಂಜಾ ಮಾರಾಟ ಮಾಡುತ್ತಾರೆ. ₹ 100 ಚಾಕೊಲೆಟ್ ಆಸೆ ತೋರಿಸಿ 2 ಕೆ.ಜಿ. ಗಾಂಜಾ ಪೊಟ್ಟಣವನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಮಕ್ಕಳ ಮೂಲಕ ಸುಲಭವಾಗಿ ತಲುಪಿಸುತ್ತಾರೆ’ ಎಂದು ಅವರು ಹೇಳಿದರು.
ಮಕ್ಕಳು ಸಿಕ್ಕಿಬಿದ್ದಲ್ಲಿ ಸುಲಭವಾಗಿ ಹೊರಗೆ ಬರಬಹುದು. ಶಿಕ್ಷೆಯ ಪ್ರಮಾಣ ಕಡಿಮೆ ಎಂಬುದು ಮಾದಕ ವಸ್ತುಗಳ ಮಾರಾಟಗಾರರ ತಂತ್ರವಾಗಿದೆ. ಮಾದಕ ಚಟಗಳಿಗೆ ದಾಸರಾದವರಿಗೆ ಮನೋ ತಜ್ಞರಿಂದ ಚಿಕಿತ್ಸೆ ಕೊಡಿಸಿ ಮುಖ್ಯವಾಹಿನಿಗೆ ತರಬೇಕು. ಶಾಲೆ, ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
‘ಇಂದಿಗೂ ಸುಶಿಕ್ಷಿತರು ಎನಿಸಿಕೊಂಡವರೇ ಶಾಲೆಯ ಅವಧಿ ಮುಗಿದ ನಂತರ ಆವರಣದಲ್ಲಿ ತಂಬಾಕು, ಮದ್ಯಪಾನ, ಧೂಮಪಾನ ಇನ್ನಿತರ ಮಾದಕ ವಸ್ತುಗಳನ್ನು ಸೇವನೆ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಬೇಸರ ವ್ಯಕ್ತಪಡಿಸಿದರು.
ಡಿವೈಎಸ್ಪಿ ಪ್ರಭು, ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಡಾ.ಮಲ್ಲಪ್ಪ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಹೇಮಂತ್ ರಾಜ್, ಶಿವಕುಮಾರ್ ಎಸ್.ಟಿ, ನಾಗರಾಜ್ ನಾಯಕ್ ಭಾಗವಹಿಸಿದ್ದರು