ಬಿಜೆಪಿಗೆ ರೈತರ ಹಾಗೂ ಬಡವರ ಬಗ್ಗೆ ಕಾಳಜಿ ಇಲ್ಲವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ‘ಭಾರತ್ ಜೋಡೋ ಯಾತ್ರೆ’ಯಲ್ಲಿ ರಾಹುಲ್ ಮಾತನಾಡಿರುವ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಪಕ್ಷ ಹಂಚಿಕೊಂಡಿದೆ.
‘ನಾನು ಯಾತ್ರೆಯುದ್ದಕ್ಕೂ ರೈತರೊಂದಿಗೆ ಸಂವಾದ ನಡೆಸುತ್ತಾ ಬಂದಿದ್ದೇನೆ. ರೈತರನ್ನು ಎಲ್ಲೂ ಕಡೆಯಿಂದಲೂ ಹಿಂಡಿ ಹಾಕಲಾಗಿದೆ. ರೈತರಿಗೆ ನೀಡಬೇಕಾದ ಬೆಂಬಲ ಬೆಲೆ ನೀಡುತ್ತಿಲ್ಲ. ಇನ್ನೊಂದೆಡೆ ಇದೇ ಮೊದಲ ಬಾರಿಗೆ ಕೃಷಿಗೂ GST ಹಾಕಲಾಗಿದೆ. ಟ್ರಾಕ್ಟರ್, ಕೀಟನಾಶಕ, ರಸಗೊಬ್ಬರಕ್ಕೂ GST ಕಟ್ಟಬೇಕಾಗಿದೆ’ ಎಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಕೃಷಿ ಕಾಯ್ದೆಗಳು, ನೋಟು ಅಮಾನ್ಯೀಕರಣ ಮತ್ತು GSTಗಳು ಮಾರಕ ಅಸ್ತ್ರಗಳು. ಇವು ಕೇವಲ ಕೇಂದ್ರದ ನೀತಿಗಳಲ್ಲ. ಬದಲಾಗಿ ಭಾರತದ ಜನರ ಮೇಲೆ, ರೈತರ ಮೇಲೆ, ಕಾರ್ಮಿಕರ, ಸಣ್ಣ ಉದ್ಯಮದ ಮೇಲೆ ದಾಳಿ ಮಾಡಲು ಬಳಸಿದ ಅಸ್ತ್ರಗಳು. ಈ ಅಸ್ತ್ರಗಳಿಂದ ಲಕ್ಷಾಂತರ ರೈತರು, ಕೂಲಿ ಕಾರ್ಮಿಕರು, ಸಣ್ಣ ಉದ್ದಿಮೆಗಳು ನಾಶವಾಗಿವೆ. ಏಕೆ ನಮ್ಮ ಜೀವನ, ಇತಿಹಾಸ, ಭಾಷೆ, ಸಂಸ್ಕೃತಿ, ಕನ್ನಡ ಇವುಗಳ ಮೇಲೆ ದಾಳಿಯಾಗುತ್ತಿದೆ? ನಮ್ಮ ಭವ್ಯವಾದ ಇತಿಹಾಸ, ಬಸವಣ್ಣನವರ ಪರಂಪರೆಯನ್ನು ಪಠ್ಯಪುಸ್ತಕದಿಂದ ಏಕೆ ಅಳಿಸಿ ಹಾಕಲಾಗುತ್ತಿದೆ? ಯಾವ ಶಕ್ತಿ ಬಸವಣ್ಣನವರ ಮೇಲೆ ದಾಳಿ ಮಾಡುತ್ತಿದೆ?’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.