ಬೆಂಗಳೂರು ನಗರದ ಪೂರ್ವ ಭಾಗ ಜಲಾವೃತವಾಗಲು ಕಾರಣವಾಗಿರುವ ರಾಜಕಾಲುವೆಗಳ ಒತ್ತುವರಿಯಲ್ಲಿ ಬಿಡಿಎ, ಬಿಬಿಎಂಪಿ, ಬಿಎಂಟಿಸಿಗಳ ಪಾತ್ರ ಹೆಚ್ಚಿದೆ.
ಅಲ್ಲದೆ, ಕೋರಮಂಗಲ- ಚಲ್ಲಘಟ್ಟ ವ್ಯಾಲಿಯ ಬೃಹತ್ ಚಲ್ಲಘಟ್ಟ ಕೆರೆಯನ್ನು ಸುಳಿವಿಲ್ಲದಂತೆಯೇ ಮಾಡಿ ಅದರ ಮೇಲೆ ಗಾಲ್ಫ್ ಕೋರ್ಸ್ ಕಟ್ಟಿರುವುದು ಕೂಡ ಮಳೆನೀರು ಐಟಿ ಕಾರಿಡಾರ್ ಹಾಗೂ ಬಡಾವಣೆಗಳಿಗೆ ನುಗ್ಗಲು ಪ್ರಮುಖ ಕಾರಣವಾಗಿದೆ.
ಧರ್ಮಾಂಬುಧಿ ಕೆರೆ ಒತ್ತುವರಿ ಮಾಡಿಕೊಂಡು ನಿಲ್ದಾಣ ಕಟ್ಟಿಕೊಂಡು ನಗರದ ಕೆರೆಗಳ ಒತ್ತುವರಿಗೆ ಮುನ್ನುಡಿ ಬರೆದ ಅಂದಿನ ಬಿಟಿಎಸ್, ಸಿ.ವಿ. ರಾಮನ್ನಗರದ ಬಿನ್ನಮಂಗಲದಲ್ಲಿ 15 ಗುಂಟೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬಿಎಂಟಿಎಸ್ ಬಸ್ ಡಿಪೊ ನಿರ್ಮಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆ, ಕಟ್ಟಡ ಎಂದು ರಾಜಕಾಲುವೆ ಹಾಗೂ ಕೆರೆ ಪ್ರದೇಶವನ್ನು ಬೆಂಗಳೂರು ಪೂರ್ವ ವಲಯದಲ್ಲಿ ಅತಿಹೆಚ್ಚು ಒತ್ತುವರಿ ಮಾಡಿಕೊಂಡಿದೆ. ಇದೆಲ್ಲ ಒತ್ತುವರಿ ಎಂದು ಅಧಿಕೃತವಾಗಿ ಬಿಬಿಎಂಪಿ ದಾಖಲೆಗಳೇ ಹೇಳುತ್ತಿದ್ದರೂ ತೆರವು ಮಾಡಲು ಯಾವ ಅಧಿಕಾರಿಗಳೂ ಮುಂದಾಗುತ್ತಿಲ್ಲ. 20-25 ವರ್ಷದಿಂದ ಇಷ್ಟೆಲ್ಲ ಒತ್ತುವರಿಯಾಗಿದ್ದರೂ, ಹಿಂದೆ ಅಧಿಕಾರ ನಡೆಸಿದ ಪಕ್ಷವಾಗಲಿ, ಈಗ ಅಧಿಕಾರ ನಡೆಸುವವರು ಸರ್ಕಾರದ ಇಲಾಖೆಗಳಿಂದಲೇ ನಡೆದಿರುವ ಒತ್ತುವರಿ ತೆರವಿನ ಬಗ್ಗೆ ಮಾತನಾಡದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ