Thursday, August 13, 2026
Thursday, August 13, 2026

ರಾಜ್ಯವ್ಯಾಪಿ ಸುರಿದ ಮಳೆ ಕೆರೆಕಟ್ಟೆಗಳು ಭರ್ತಿ ರೈತರಿಗೆ ಹರ್ಷ

Date:

ರಾಜ್ಯದ ಕರಾವಳಿ, ಮಲೆನಾಡು ಮಾತ್ರವಲ್ಲದೆ ಬಯಲುಸೀಮೆಯಲ್ಲೂ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿ, ಹಳ್ಳ-ತೊರೆಗಳು ತುಂಬಿ ಹರಿಯುತ್ತಿರುವುದರೊಂದಿಗೆ ಶೇ.71ಕ್ಕೂ ಹೆಚ್ಚು ಪ್ರಮುಖ ಕೆರೆ, ಸರೋವರಗಳು ತುಂಬಿದ್ದು ಅಂತರ್ಜಲ ಮಟ್ಟವೂ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿವೆ.

ಈ ಬಾರಿ ಉತ್ತಮ ವರ್ಷಧಾರೆಯಿಂದ ಎಲ್ಲ ಕೆರೆ- ಕಟ್ಟೆಗಳಲ್ಲೂ ನೀರು ನಳನಳಿಸುತ್ತಿದೆ. ಲಭ್ಯ ಮಾಹಿತಿಯ ಪ್ರಕಾರ, 25 ಜಿಲ್ಲೆಗಳಲ್ಲಿರುವ 10500ಕ್ಕೂ ಅಧಿಕ ದೊಡ್ಡ ಮತ್ತು ಸಣ್ಣ ಕೆರೆಗಳಲ್ಲಿ 7,522 ಪ್ರಮುಖ ಕೆರೆಗಳು ಮಳೆಗಾಲ ಮುಗಿಯುವ ಮುನ್ನವೇ ಭರ್ತಿಯಾಗಿ ಕೋಡಿ ಹರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಜ್ಯದಲ್ಲಿ ಕೋಲಾರ ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಕೆರೆಗಳಿದ್ದು ಬಹುತೇಕ ಎಲ್ಲವೂ ಭರ್ತಿಯಾಗಿವೆ. ಕಳೆದ ವರ್ಷವೇ ಇಲ್ಲಿ ಕೆಸಿ ವ್ಯಾಲಿ ನೀರು ಹರಿದು ಬಂದಿದ್ದರಿಂದ ನೀರಿನ ಪ್ರಮಾಣ ಹೆಚ್ಚಿತ್ತು. ಈ ಬಾರಿ ನಿರಂತರ ಮಳೆಗೆ 1875ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿವೆ. ಕಳೆದ ವರ್ಷ ಬಿದ್ದ ಮಳೆಯಿಂದಲೇ ಕೋಲಾರಮ್ಮನ ಕೆರೆ, ಕಣ್ಣೂರು ಕೆರೆಯೂ ಸೇರಿದಂತೆ ಇಲ್ಲಿನ ಬಹುತೇಕ ಕೆರೆಗಳು 25 ವರ್ಷಗಳ ಬಳಿಕ ಕೋಡಿ ಬಿದ್ದಿದ್ದವು. ಇದೀಗ ಮತ್ತೆ ಅದರ ಪುನರಾವರ್ತನೆಯಾಗಿದೆ.

ಇನ್ನು ರಾಮನಗರ ಜಿಲ್ಲೆಯಲ್ಲಿರುವ ಒಟ್ಟು 1451 ಕೆರೆಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಮಳೆಗೆ 1281 ಭರ್ತಿಯಾಗಿವೆ. ಜಿಲ್ಲೆ​ಯಲ್ಲಿ ಅತಿ ದೊಡ್ಡ ಕೆರೆ​ಗ​ಳಾದ ಮಾಗಡಿ ತಾಲೂಕು ಕುದೂರು ಹೋಬ​ಳಿಯ ಮಾಯ​ಸಂದ್ರ ಕೆರೆ 20 ವರ್ಷ​ಗಳ ನಂತರ ಕೋಡಿ ಬಿದ್ದರೆ, ರಾಮ​ನ​ಗರ ತಾಲೂ​ಕಿನ ಕೇತೋ​ಹಳ್ಳಿ ಕೆರೆ 15 ವರ್ಷಗಳ ತರು​ವಾಯ ಮೈದುಂಬಿ​ಕೊಂಡಿದೆ.

ಮಂಡ್ಯ ಜಿಲ್ಲೆಯಲ್ಲಿ 1024 ಕೆರೆಗಳಿವೆ. ವರುಣಾರ್ಭಟಕ್ಕೆ ಬಹುತೇಕ ಕೆರೆಗಳು ಭರ್ತಿಯಾಗಿವೆ. ಸುಮಾರು 600ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿದ್ದರೆ, ಮಳೆ ನೀರಿನ ರಭಸಕ್ಕೆ ನೂರಾರು ಕೆರೆಗಳು ಒಡೆದುಹೋಗಿವೆ. ಮಳೆಯಾಶ್ರಿತ ಪ್ರದೇಶದಲ್ಲಿದ್ದ ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ. ದುರ್ದೈವವೆಂದರೆ ಕೆ.ಆರ್‌.ಪೇಟೆ ತಾಲೂಕು ಸಂತೇಬಾಚಹಳ್ಳಿ ಹೋಬಳಿಯ ನಾಲ್ಕೈದು ಕೆರೆಗಳು ಭರ್ತಿಯಾದ ಸಂತಸದಲ್ಲಿ ರೈತರಿದ್ದರು. ಆದರೆ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಆ ಕೆರೆಗಳು ಒಡೆದು ಖಾಲಿಯಾಗಿವೆ.

ಹಾಸನ ಜಿಲ್ಲೆಯಲ್ಲಿ 250ರಲ್ಲಿ 200 ಕೆರೆಗಳು ಭರ್ತಿಯಾಗಿದ್ದರೆ, ತುಮಕೂರು ಜಿಲ್ಲೆಯ 371 ಕೆರೆಗಳ ಪೈಕಿ 240 ಕೆರೆಗಳು ಭರ್ತಿಯಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ 64 ಪ್ರಮುಖ ಕೆರೆಗಳಲ್ಲಿ 17 ಕೆರೆಗಳು ಭರ್ತಿಯಾಗಿವೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 49 ಕೆರೆಗಳು ಭರ್ತಿಯಾಗಿ ಕೋಡಿ ಹರಿದಿವೆ.

ಇದೇ ವೇಳೆ ಉತ್ತರ ಕರ್ನಾಟಕದ ಭಾಗದ ಬೆಳಗಾವಿ ಜಿಲ್ಲೆಯ ಒಟ್ಟು 288 ಕೆರೆಗಳಲ್ಲಿ 118 ಕೆರೆಗಳು ಭರ್ತಿಯಾಗಿದ್ದರೆ, ವಿಜಯಪುರ ಜಿಲ್ಲೆಯ ಒಟ್ಟು 156 ಕೆರೆಗಳಲ್ಲಿ 108 ಕೆರೆಗಳು ಭರ್ತಿಯಾಗಿವೆ. ಬಾಗಲಕೋಟೆ ಜಿಲ್ಲೆಯ ಒಟ್ಟು 62 ಕೆರೆಗಳಲ್ಲಿ 32 ಕೆರೆಗಳು ಭರ್ತಿಯಾಗಿವೆ. ಧಾರವಾಡ ಜಿಲ್ಲೆಯಲ್ಲಿ 260 ಕೆರೆಗಳಿದ್ದು 80 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ 492 ಕೆರೆಗಳಲ್ಲಿ 492 ಕೆರೆಗಳೂ ಭರ್ತಿಯಾಗಿದ್ದರೆ, ಹಾವೇರಿ ಜಿಲ್ಲೆಯ 1146 ಕೆರೆಗಳಲ್ಲಿ 300, ಗದಗ ಜಿಲ್ಲೆಯ 186ರಲ್ಲಿ 86 ಕೆರೆಗಳು ಭರ್ತಿಯಾಗಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...