ಭದ್ರತೆ ಒದಗಿಸುವುದು ಕಷ್ಟಸಾಧ್ಯ ಹಾಗೂ ಅನೈತಿಕ ಚಟುವಟಿಕೆ ತಡೆಯುವ ಉದ್ದೇಶದಿಂದ ಕಬ್ಬನ್ ಉದ್ಯಾನದಲ್ಲಿ ಸಂಜೆ 6.30ರ ನಂತರ ಸಾರ್ವಜನಿಕರ ಪ್ರವೇಶ ಮತ್ತು ವಾಯು ವಿಹಾರ ಮಾಡುವುದನ್ನು ತೋಟಗಾರಿಕೆ ಇಲಾಖೆ ನಿರ್ಬಂಧಿಸಿದೆ.
ಆದರೆ ವಾಹನಗಳ ಸಂಚಾರ ಎಲ್ಲ ದ್ವಾರಗಳಲ್ಲಿ ರಾತ್ರಿ 10ರವರೆಗೆ ಇರುತ್ತದೆ. ಸಂಜೆ ರಾತ್ರಿ 7.30ರ ವರೆಗೂ ಪ್ರವಾಸಿಗರು ಓಡಾಡುವುದು ಸಾಮಾನ್ಯವಾಗಿತ್ತು. ಆದರೆ, ಇನ್ನು ಮುಂದೆ ಪ್ರತಿ ದಿನ ಸಂಜೆ 6.30ರ ನಂತರ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಉದ್ಯಾನಕ್ಕೆ ಪ್ರವೇಶ ನಿರ್ಬಂಧಿಸುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಲಾಲ್ಬಾಗ್ನಲ್ಲಿ ಸಂಜೆ 6.30ಕ್ಕೆ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಕಬ್ಬನ್ ಪಾರ್ಕ್ನಲ್ಲೂ ಕ್ರಮ ಕೈಗೊಳ್ಳಲಾಗಿದೆ. ಪ್ರವೇಶ ದ್ವಾರಗಳಲ್ಲಿ ಇರುವ ಭದ್ರತಾ ಸಿಬ್ಬಂದಿ ಸಂಜೆ 6.30ರ ನಂತರ ಬರುವವರಿಗೆ ಅವಕಾಶ ನಿರಾಕರಿಸಲಿದ್ದಾರೆ.
ಈ ವೇಳೆ ಉದ್ಯಾನದಲ್ಲಿ ಯಾರಾದರೂ ಸಂಚರಿಸುತ್ತಿದ್ದರೆ ಅಂತಹವರನ್ನು ಹೊರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವೆಂಬರ್ನಿಂದ ಫೆಬ್ರವರಿಯವರೆಗೆ ಬೇಗ ಕತ್ತಲಾಗುತ್ತದೆ. ಉದ್ಯಾನದೊಳಗೆ ರಾತ್ರಿ 7ರ ನಂತರ ಜನ ಇದ್ದರೆ ಅವರಿಗೆ ಭದ್ರತೆ ಒದಗಿಸುವುದು ಕಷ್ಟಸಾಧ್ಯ.
ಉದ್ಯಾನದ ಎಲ್ಲಾ ಕಡೆ ಭದ್ರತಾ ಸಿಬ್ಬಂದಿ ನೇಮಕ ಅಥವಾ ಸಿಸಿ ಕ್ಯಾಮೆರಾ ಅಳವಡಿಕೆ ಸಾಧ್ಯವಿಲ್ಲ. ಅಲ್ಲದೆ ಅನೈತಿಕ ಚಟುವಟಿಕೆಗಳೂ ನಡೆಯುತ್ತವೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ಪಾರ್ಕ್ ಉಸ್ತುವಾರಿ) ಎಚ್.ಟಿ.ಬಾಲಕೃಷ್ಣ ತಿಳಿಸಿದರು.