ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಮತದಾರರು ಸ್ವಯಂಪ್ರೇರಿತರಾಗಿ ಆಧಾರ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆಗಳಿಗೆ ತರಲಾಗಿರುವ ತಿದ್ದುಪಡಿಗಳ ಕುರಿತಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿರುವುದನ್ನು ಗುರುತಿಸುವ ಉದ್ದೇಶದಿಂದ ಆಧಾರ್ ಸಂಖ್ಯೆ ಜೋಡಣೆ ವ್ಯವಸ್ಥೆ ಮಾಡಲಾಗಿದೆ.
ನಮೂನೆ 6-ಬಿ ಮೂಲಕ ಬಿಎಲ್ಒ ಕಚೇರಿಯಲ್ಲಿ, ಮನೆ ಮನೆ ಭೇಟಿ ವೇಳಿ ಇಆರ್ಒಗಳ ಬಳಿ ಅಥವಾ ವೆಬ್ಸೈಟ್ನಲ್ಲಿಯೂ ಸ್ವಯಂ ನೋಂದಾವಣಿ ಮಾಡಬಹುದಾಗಿದೆ. ಸಂಗ್ರಹಿಸಲಾಗುವ ಆಧಾರ್ ಸಂಖ್ಯೆಯ ಭದ್ರತೆಯನ್ನು ಖಾತ್ರಿಪಡಿಸಲಾಗುವುದು. ಒಂದು ವೇಳೆ ಆಧಾರ್ ಸಂಖ್ಯೆ ಇಲ್ಲದಿದ್ದರೆ ನಿಗದಿಪಡಿಸಲಾಗಿರುವ ಇತರ 11 ದಾಖಲೆಗಳ ಪೈಕಿ ಒಂದು ದಾಖಲೆ ಒದಗಿಸಿ ನೋಂದಣಿ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ಗುರುತಿಸಲಾಗಿದೆ. ಇದುವರೆಗೆ ಜನವರಿ 1ರಂದು 18ವರ್ಷ ತುಂಬುವವರು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಮಾಡಲು ಅವಕಾಶವಿತ್ತು. ಇದೀಗ ಇದರೊಂದಿಗೆ ಎಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಅರ್ಹತಾ ದಿನಾಂಕವಾಗಿ ಪರಿಗಣಿಲಾಗುವುದು.
ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಪರಿಷೃತ ನಮೂನೆ-6ರಲ್ಲಿ ಕೇವಲ ಹೊಸ ಮತದಾರರ ನೋಂದಣಿಗೆ ಮಾತ್ರ ಅವಕಾಶವಿದೆ ಎಂದರು
ವಿಧಾನಸಭಾ ಕ್ಷೇತ್ರಗಳಲ್ಲಿನ ಬೂತ್ ಮಟ್ಟದಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವ ಕುರಿತು ಮತದಾರರಿಗೆ ಅರಿವು ಮೂಡಿಸಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. ಎಲ್ಲಾ ರಾಜಕೀಯ ಪಕ್ಷಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ತೃತೀಯ ಲಿಂಗಿ/ಅನಾಥ ಸಂದರ್ಭದಲ್ಲಿ ಕಾನೂನು ರಕ್ಷಕರ ವಿವರಗಳನ್ನು ಸಂಬಂಧಿಕರ ವಿವರಗಳ ಅಡಿಯಲ್ಲಿ ನೀಡಬಹುದಾಗಿದೆ. ಅಂಗವಿಕಲ ಮತದಾರರಿಗೆ ಅಂಗವೈಕಲ್ಯದ ಶೇಕಡಾವಾರು ಪ್ರಮಾಣವನ್ನು ಅದರ ಪ್ರಮಾಣಪತ್ರದೊಂದಿಗೆ ನಮೂದಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.