ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಮಂಗಳವಾರ ರಾತ್ರಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಾಪು ಶ್ರೀ ಮಾರಿಯಮ್ಮ ದೇವಿಯ ಭಕ್ತೆಯಾಗಿರುವ ಸಿನಿ ಶೆಟ್ಟಿ ಅವರು ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರಾದ ನಂತರ ಮೊದಲ ಬಾರಿಗೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ಸಿನಿ ಶೆಟ್ಟಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ದೇವಸ್ಥಾನದ ವತಿಯಿಂದ ಅರ್ಚಕ ಶ್ರೀಧರ ತಂತ್ರಿ ಅವರ ಮೂಲಕವಾಗಿ ಪ್ರಸಾದ ನೀಡಿ ಗೌರವಿಸಲಾಯಿತು.
ಗೌರವವನ್ನು ಸ್ವೀಕರಿಸಿ ಮಾತನಾಡಿದ ಸಿನಿ ಶೆಟ್ಟಿ ಅವರು, ನಾನು ಮಾರಿಯಮ್ಮ ದೇವಿಯ ಭಕ್ತಿಯಾಗಿದ್ದು, ನಾನು ಚಿಕ್ಕವಯಸ್ಸಿನಿಂದಲೂ ನನ್ನ ತಂದೆ ತಾಯಿಯೊಂದಿಗೆ ಇಲ್ಲಿಗೆ ಬರುತ್ತಿದ್ದೆ. ಈಗ ಮಿಸ್ ಇಂಡಿಯಾ ಆಗಿ ಬರುತ್ತಿರುವುದಕ್ಕೆ ಮಾರಿಯಮ್ಮ ದೇವಿಯ ಅನುಗ್ರಹವೇ ಮುಖ್ಯ ಕಾರಣ. ಮುಂದೆ ಅಮ್ಮನ ಇದೇ ರೀತಿಯಲ್ಲಿ ಜಗದಗಲಕ್ಕೆ ಹರಡಿರುವ ಮಾರಿಯಮ್ಮ ದೇವಿಯ ಭಕ್ತರೆಲ್ಲರೂ ಶಿಲಾ ಸೇವೆ ನೀಡುವ ಮುಖಾಂತರ ಮಾರಿಗುಡಿಯ ಜೀರ್ಣೋದ್ಧಾರದಲ್ಲಿ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಪುಶ್ರೀ ಹೊಸ ಮಾರಿ ಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಇನ್ನು ಮುಂತಾದವರು ಉಪಸ್ಥಿತರಿದ್ದರು.