ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷೀ ಪ್ರಸಾದ್ ಅವರು ಲೋಗೋ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘವು ತನ್ನದೇ ಪ್ರತ್ಯೇಕ ಲೋಗೋ ಹೊಂದುವ ಮೂಲಕ ಹಿರಿಮೆ ಹೆಚ್ಚಿಸಿಕೊಂಡಿದೆ ಎಂದರು.
ಪ್ರತಿಯೊಂದು ಸಂಘ-ಸಂಸ್ಥೆಗಳಿಗೆ ಲೋಗೋ ಜೀವಾಳ. ನಮ್ಮ ನಾಡಿಗೂ ಒಂದು ಲೋಗೋ ಇದೆ. ನಾವು ಹಾಕಿಕೊಳ್ಳುವ ಸಮವಸ್ತ್ರ ಕೂಡ ಒಂದು ಲೋಗೋ. ಲೋಗೊ ನಮ್ಮನ್ನು ನಾವು ಗುರುತಿಸಿಕೊಳ್ಳುವ ಸಂಕೇತ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಸಂಘ ತನ್ನದೇ ಆದ ಲೋಗೋ ಬಿಡುಗಡೆ ಮಾಡಿರುವುದು ಪತ್ರಕರ್ತರಿಗೆ ಸ್ಪೂರ್ತಿ ತುಂಬುವಂತೆ ಕೆಲಸ. ಸಂಘ ಮುಂದೆ ಯಶಸ್ವಿ ಹಾದಿಯಲ್ಲಿ ನಡೆಯಲಿ ಎಂದು ಆಶಿಸಿದರು.
ಪತ್ರಕರ್ತರ ಕೆಲಸ ಅಷ್ಟು ಸುಲಭವಾದದ್ದಲ್ಲ. ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವ ಪತ್ರಕರ್ತರ ಸಮಯ ಪ್ರಜ್ಞೆ ಶ್ಲಾಘನೀಯ ಎಂದು ಬಣ್ಣಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್ ಮಾತನಾಡಿ, ಲೋಗೋ ಅಯಾ ಸಂಸ್ಥೆಯ ಪ್ರತಿಷ್ಠೆಯ ಪ್ರತೀಕ.
ಇದಕ್ಕೆ ಪೂರಕವಾಗಿ ತತ್ವ ಅಳವಡಿಸಿಕೊಂಡು ಸತ್ಯ, ನಿಖರತೆ, ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಬದ್ದತೆಯ ಮನೋಭಾವದಿಂದ ಕೆಲಸ ನಿರ್ವಹಿಸಿದರೆ ಆ ಸಂಘಟನೆ ತನ್ನ ಗುರಿಯನ್ನು ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಶಸ್ವಿಯಾಗಲಿ ಎಂದು ಹಾರೈಸಿದರು.
ವಾರ್ತಾ ಇಲಾಖೆಯ ಹಿರಿಯ ವಾರ್ತಾಧಿಕಾರಿ ಶಫಿ ಸಾಸುದ್ದೀನ್ ಮಾತನಾಡಿ, ಯಾರಿಂದಲೂ ಲಾಭವನ್ನು ಅಪೇಕ್ಷೆ ಮಾಡದೆ ಪತ್ರಿಕಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿ, ಪತ್ರಕರ್ತರ ಸಮಸ್ಯೆ ಬಗ್ಗೆ ಅರಿವಿರುವ ಗೋಪಾಲ್ ಯಡಗೆರೆ ಅವರು ಸಂಘದ ಅಧ್ಯಕ್ಷರಾಗಿರುವುದರಿಂದ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಘ ಬಲಿಷ್ಟವಾಗಿ ಬೆಳೆಯುವುದಲ್ಲಿ ಯಾವುದೇ ಎಂದು ಅನುಮಾನವಿಲ್ಲ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಈ ಹಿಂದೆ ಹಲವು ವರ್ಷದಿಂದ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ನಿವೇಶ ಕೊಡಿಸುವ ವಿಚಾರ ಬಂದಾಗ ಜಿಲ್ಲೆಯಲ್ಲಿ ಪತ್ರಕರ್ತರ ಸಂಘ ಅಸ್ತಿತ್ವ ಇಲ್ಲದ ಕಾರಣ ಸಾಕಷ್ಟು ಅಡೆಚಣೆಗಳು ಆಗಿದ್ದವು.
ಆಗಿಂದ ಜಿಲ್ಲೆಯ ಪತ್ರಕರ್ತರನ್ನು ಒಗ್ಗೂಡಿಸಲು ಪತ್ರಕರ್ತರ ಸಂಘದವನ್ನು ಅಸ್ತಿತ್ವಕ್ಕೆ ತರಬೇಕು ಎಂಬುದು ನಮ್ಮ ಕನಸಾಗಿತ್ತು.
2 ದಶಕದ ಕನಸು ಈಗ ಗೋಪಾಲ್ ಯಡಗೆರೆ ಅವರ ನೇತೃತ್ವದ ಮೂಲಕ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅವರು ಮಾತನಾಡಿ, ಸ್ಥಾನಮಾನ ಇದೆ ಎಂದು ಅಹಂಕಾರದಿಂದ ಬೀಗುವುದು ಮೂರ್ಖತನದ ಪರಮಾವಧಿ.
ಪತ್ರಕರ್ತರಾದ ನಾವು ಕಾರ್ಡ್ನಿಂದ ಗುರುತಿಸಿಕೊಳ್ಳದೇ, ಕಾರ್ಯದಿಂದ ಗುರುತಿಸಿಕೊಳ್ಳುವಂತ ಕೆಲಸ ಆಗಬೇಕು. ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಂಕಷ್ಟಕ್ಕೆ ನೆರವಾಗುವುದೇ ಸಂಘದ ಮುಖ್ಯ ಉದ್ದೇಶವಾಗಿದ್ದು, ನಂಬಿಕೆ, ಪ್ರೀತಿ, ವಿಶ್ವಾಸದಿಂದ ಸಂಘಟನೆ ಬಲ ಪಡಿಸಲಾಗುವುದು ಎಂದು ತಿಳಿಸಿದರು.
ಸಂಘದ ನಿರ್ದೇಶಕ ರಾಮಚಂದ್ರ ಗುಣಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಎಸ್.ಚಂದ್ರಕಾಂತ್, ಸಾಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಗುಂಡೂಮನೆ ಇದ್ದರು. ಸಂಘದ ಉಪಾಧ್ಯಕ್ಷರಾದ ಹುಲಿಮನೆ ತಿಮ್ಮಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೋ.ವ.ಮೋಹನಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಕಿರಣ್ ಕಂಕಾರಿ ವಂದಿಸಿದರು.