ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಂತೋಷದ ಸುದ್ದಿ ನೀಡಿದ್ದಾರೆ.
ಇನ್ನು ಮುಂದೆ ಪ್ರತಿ ವರ್ಷ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ, ಬಡ್ತಿ ಸೇರಿ ಅನೇಕ ಕಾರಣಗಳಿಂದ ಖಾಲಿಯಾಗಿರುವ ಶಿಕ್ಷಕರ ಹುದ್ದೆಗಳಿಗೆ ಇನ್ನು ಮುಂದೆ ಪ್ರತಿ ವರ್ಷ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರತಿ ವರ್ಷ ಶಿಕ್ಷಣ ಇಲಾಖೆಯಲ್ಲಿ ನಾಲ್ಕೈದು ಸಾವಿರ ಶಿಕ್ಷಕರು ನಿವೃತ್ತಿಯಾಗುತ್ತಾರೆ. ಖಾಲಿಯಾಗಿರುವ ಹುದ್ದೆಗಳನ್ನು ಆಯಾ ವರ್ಷವೇ ಭರ್ತಿಮಾಡುವ ಕುರಿತಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ, ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಅವರನ್ನು ಶಾಲೆಗೆ ನಿಯೋಜಿಸಲಾಗುತ್ತದೆ. ಈ ಪೈಕಿ ಕನಿಷ್ಟ 12 ಸಾವಿರ ಹುದ್ದೆಗಳಾದರೂ ಭರ್ತಿಯಾಗುವ ನಿರೀಕ್ಷೆ ಇದೆ. ನೇಮಕಾತಿ ಪೂರ್ಣಗೊಂಡ ಬಳಿಕ ಖಾಲಿ ಉಳಿಯುವ ಹುದ್ದೆಗಳಿಗೆ ಜನವರಿಯಲ್ಲಿ ಮತ್ತೆ ಸಿಇಟಿ ನಡೆಸಿ ಮತ್ತೊಂದು ನೇಮಕಾತಿ ಪ್ರಕ್ರಿಯೆ ನಡೆಸುತ್ತೇವೆ ಎಂದು ಹೇಳಿದ್ದಾರೆ.