ಜಗತ್ತಿನ ಜನಸಂಖ್ಯೆಯಲ್ಲಿ ಅತಿ ದೊಡ್ಡ ಮೊತ್ತದ ಯುವ ಶಕ್ತಿಯನ್ನು ಹೊಂದಿರುವ ಭಾರತ ದೇಶದ ನಿಜವಾದ ಸಂಪತ್ತು ಯುವ ಸಮೂಹವಾಗಿದೆ. ಯುವ ಸಮೂಹವು ಅಭಿವೃದ್ಧಿಶೀಲ ಭಾರತ ಎನ್ನುವ ಹಣೆಪಟ್ಟಿಯನ್ನು ಹೋಗಲಾಡಿಸಿ ಅಭಿವೃದ್ಧಿ ಹೊಂದಿದ ರಾಷ್ಟ್ರ ಭಾರತ ಎನ್ನುವ ಮಟ್ಟಕ್ಕೆ ಕೊಂಡೊಯ್ಯಬೇಕು. ಇದಕ್ಕಾಗಿ ಹೊಸತನದ ಅವಿಷ್ಕಾರಗಳನ್ನು ನಡೆಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ರೆಜಿಸ್ಟ್ರಾರ್ ಡಾ. ಕೆ.ಶಿವಶಂಕರ್ ಅವರು ತಿಳಿಸಿದ್ದಾರೆ.
ಅವರು, ದಾವಣಗೆರೆಯ ಬಾಪೂಜಿ ಮೆನೇಜ್ಮೆಂಟ್ ಕಾಲೇಜಿನ ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧೋತ್ಸವ ಆಗ್ಟಾಗನ್ ನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಹುಮಾನ ಮತ್ತು ಚಾಂಪಿಯನ್ ಶಿಪ್ ಟ್ರೋಫಿ ವಿತರಿಸಿ ಮಾತನಾಡುತ್ತಾ, ಹೊಸತನದ ಆವಿಷ್ಕಾರಗಳಿಗೆ ಪ್ರೇರಣೆಯಾಗುವ ಇಂತಹ ಸ್ಪರ್ಧೆಗಳು ಉಪಯುಕ್ತವಾಗಿದೆ. ಇದರಿಂದ ವಿಕಾಸವಾಗಬೇಕು.ವಿಕಾಸವೇ ನಮ್ಮ ವಿಳಾಸವಾಗಬೇಕು. ನಾವು ಮಾತನಾಡುವುದಲ್ಲ. ನಮ್ಮ ಕಾರ್ಯಗಳೇ ಮಾತನಾಡುವಂತಾಗಬೇಕು ಎಂದು ಹೇಳಿದ್ದಾರೆ.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ನಿರ್ವಹಣೆಯ ಬಗ್ಗೆ ವಿಶೇಷ ಅರಿವು ಉಂಟು ಮಾಡುವುದೇ ಈ ಸ್ಪರ್ಧೋತ್ಸವದ ಉದ್ದೇಶವಾಗಿದೆ. ಅದು ಇಲ್ಲಿ ಯಶಸ್ವಿಯಾಗಿದೆ. ಇದು ಬಹು ಮಾನಕ್ಕಿಂತ ದೊಡ್ಡದು ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ನಾಗರಾಜ್,ಬಾಪೂಜಿ ಹೈಟೆಕ್ ಕಾಲೇಜಿನಪ್ರಾಂಶುಪಾಲ ಡಾ.ಬಿ. ವೀರಪ್ಪ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ವಿಭಾಗ ಮುಖ್ಯಸ್ಥ, ಸ್ಪರ್ಧೋತ್ಸವದ ಮುಖ್ಯ ನಿರ್ವಾಹಕ ಡಾ. ಪ್ರಕಾಶ್ ಎಸ್. ಅಳಲಗೇರಿ ವಂದನೆ ಸಲ್ಲಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಮಹೇಂದ್ರ ಹಾಗೂ ಶ್ರೀರಕ್ಷ ಮಾಡಿದರೆ, ಇಂಚರ ಮೂರ್ತಿ ಪ್ರಾರ್ಥನಾ ಗೀತೆ ಹಾಡಿದರು. ಆಕ್ಟಾಗನ್ ನ ಚಾಂಪಿಯನ್ಶಿಪ್ ಫಲಕವನ್ನು ಸಹ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ವರದಿ ಕೃಪೆ: ಎಚ್.ಬಿ.ಮಂಜುನಾಥ