ಮೋದಿ ಸರ್ಕಾರವು ಜುಲೈ 1 ರಿಂದ ವೇತನ,ಉದ್ಯೋಗ ಸುರಕ್ಷತೆ , ಸಾಮಾಜಿಕ ಭದ್ರತೆ, ಹಾಗೂ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಯ ಆಧಾರದ ಮೇಲೆ 4 ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಹೊಸ ಕಾರ್ಮಿಕ ಸಂಹಿತೆಯಲ್ಲಿ ಉದ್ಯೋಗಿಗಳ ಕೆಲಸದ ಅವಧಿ, ವೇತನ, ಭವಿಷ್ಯ ನಿಧಿಯಲ್ಲಿ ಕೊಡುಗೆ, ಗಳಿಕೆ ರಜೆಯ ನಗದೀಕರಣ ಮೊದಲಾದ ವಿಚಾರಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ.
ಈ ಹೊಸ ಕಾರ್ಮಿಕ ಸಂಹಿತೆ ಜಾರಿಗೆ ಬಂದರೆ ಕೈಗೆ ಬರುವ ವೇತನದ ಪ್ರಮಾಣ ಕಡಿಮೆಯಾಗಿ ಪಿಎಫ್ ಹಾಗೂ ಗ್ಯಾಚ್ಯುಟಿಯ ಪ್ರಮಾಣದಲ್ಲಿ ಏರಿಕೆಯಾಗಬಹುದು. ವಾರದಲ್ಲಿ 4 ದಿನ ಮಾತ್ರ ಕೆಲಸಕ್ಕೆ ಹಾಜರಾಗಬೇಕಾಗಿದ್ದು, ದೈನಂದಿನ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.
ಹೊಸ ಕಾರ್ಮಿಕ ಸಂಹಿತೆಯ ಕರಡುಗಳನ್ನು 23 ರಾಜ್ಯಗಳು ಈಗಾಗಲೇ ಪ್ರಕಟಿಸಿವೆ. ಫೆ. 2021ರಲ್ಲಿ ಕೇಂದ್ರ ಸರ್ಕಾರವು ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನಯ ಪೂರ್ಣಗೊಳಿಸಿದೆ.
ಕೇಂದ್ರ ಸರ್ಕಾರವು ಸೆ.29, 2020ರಂದು ವೇತನದ ಸಂಹಿತೆ (2019), ಕೈಗಾರಿಕಾ ಸಂಬಂಧಗಳ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020) ಹಾಗೂ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ (2020) ಅನ್ನು ಪ್ರಕಟಿಸಿತ್ತು.
ಕಾರ್ಮಿಕ ವಿಚಾರವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಏಕಕಾಲದಲ್ಲಿಯೇ ಹೊಸ ಸಂಹಿತೆ ಜಾರಿಗೆ ತರಲಿ ಎಂದು ಬಯಸುತ್ತಿದೆ ಎನ್ನಲಾಗಿದೆ.