ರಷ್ಯಾ ,ಉಕ್ರೇನ್ ನಡುವಿನ ಯುದ್ಧದ ವಿಚಾರದಲ್ಲಿ ಭಾರತ ತಳೆದಿರುವ ತಟಸ್ಥ ನಿಲುವಿನ ಬಗ್ಗೆ ಐರೋಪ್ಯ ರಾಷ್ಟ್ರಗಳು ಟೀಕೆ ಮಾಡುತ್ತಿವೆ. ಈ ವಿಚಾರಕ್ಕೆ ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರು ತಿರುಗೇಟು ನೀಡಿದ್ದಾರೆ.
ಗ್ಲೋಬ್ಸೆಕ್ 2022 ಬ್ರಟಿಸ್ಲಾವಾ ಫೋರಂನಲ್ಲಿ ಮಾತನಾಡಿದ ಅವರು, ಯೂರೋಪ್ನ ಸಮಸ್ಯೆಗಳು ಇಡೀ ವಿಶ್ವದ ಸಮಸ್ಯೆಗಳು ಎಂಬಂತೆ ಬಿಂಬಿಸುವುದನ್ನು ಮೊದಲು ಬಿಡಿ ಎಂದು ಸಚಿವ ಎಸ್. ಜೈ. ಶಂಕರ್ ಅವರು ಹೇಳಿದ್ದಾರೆ.
ರಷ್ಯಾ, ಉಕ್ರೇನ್ ಯುದ್ಧದಲ್ಲಿ ಭಾರತ ದೂರದಲ್ಲಿ ನಿಂತು ನೋಡುತ್ತಿಲ್ಲ. ನಮ್ಮ ನಿಲುವು ಈ ವಿಚಾರದಲ್ಲಿ ತಟಸ್ಥವಾಗಿದೆಯಷ್ಟೇ ಎಂದು ಸ್ಪಷ್ಟ ಪಡಿಸಿದ್ದಾರೆ.
ರಷ್ಯಾದಿಂದ ನಾವು ತೈಲ ಖರೀದಿಸಿದರೆ, ಅದರಿಂದ ಬರುವ ಹಣವನ್ನು ರಷ್ಯಾ ಯುದ್ಧಕ್ಕೆ ಬಳಸುತ್ತದೆಂಬ ಆಪಾದನೆ ಭಾರತದ ಮೇಲಿದೆ. ಆದರೆ, ಐರೋಪ್ಯ ರಾಷ್ಟ್ರಗಳು ರಷ್ಯಾದ ಅಡುಗೆ ಅನಿಲ ಖರೀದಿಸುತ್ತಿಲ್ಲವೇ, ಅದರಿಂದ ಬಂದ ಹಣವು ಯುದ್ಧಕ್ಕೆ ಉಪಯೋಗವಾಗುವುದಿಲ್ಲವೇ ಎಂದು ಜೈ ಶಂಕರ್ ಅವರು ಹೇಳಿದ್ದಾರೆ.
ನಾವು ತೈಲ ಖರೀದಿಸುತ್ತಿರುವುದು ಅದು ಅಗ್ಗದ ದರಕ್ಕೆ ಸಿಗುತ್ತಿದೆ ಎಂಬ ಕಾರಣಕ್ಕೆ. ನಮ್ಮ ಜನರಿಗೆ ಅದರಿಂದ ಒಳಿತಾಗುತ್ತದೆ ಎಂಬ ದೃಷ್ಟಿಯಿಂದ ನಾವು ತೈಲ ಖರೀದಿಸುತ್ತಿದ್ದೇವೆ ಎಂದು ಜೈ ಶಂಕರ್ ಸ್ಪಷ್ಟವಾಗಿ ವಿವರಿಸಿದ್ದಾರೆ.
