ಹೊಸನಗರ ಹಾಗೂ ಸಾಗರ ಎಪಿಎಂಸಿಗಳನ್ನು ಮರ್ಜ್ ಮಾಡುವ ಪ್ರಸ್ತಾವನೆಯನ್ನು ಕೈ ಬಿಡಲಾಗಿದ್ದು, ಈಗಿರುವ ಸ್ಥಿತಿಯಲ್ಲಿಯೇ ಇವು ಕಾರ್ಯನಿರ್ವಹಿಸಲಿವೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪನವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರಕ್ಕೆ ಬೈಪಾಸ್ ರಸ್ತೆ ಅಗತ್ಯವಾಗಿರುವುದರಿಂದ ಇದನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಮಾಲೀಕರು ಬಿಟ್ಟು ಕೊಡಲು ಮುಂದೆ ಬಂದರೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಬೈಪಾಸ್ ರಸ್ತೆ ಮಾಡಿದರೆ ಪಟ್ಟಣದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಮುಳುಗಡೆ ಪ್ರದೇಶದವರಿಗೆ ಅರಣ್ಯ ಕಾಯಿದೆಗಳಿಂದ ಮುಕ್ತಿಯೇ ಇಲ್ಲದಂತಾಗಿದೆ. ಒಂದಾದ ಮೇಲೊಂದರಂತೆ ನಿಯಮಗಳನ್ನು ಹೇರಲಾಗುತ್ತಿದೆ. ಮಂಗನ ಕಾಯಿಲೆ ಸಂಶೋಧನಾ ಲ್ಯಾಬ್ ಸಾಗರದಲ್ಲಿ ಆರಂಭಿಸಲು ಗುರುತಿಸಲಾಗಿತ್ತು. ಆದರೆ ವಿಜ್ಞಾನಿಗಳು ಅಲ್ಲಿಗೆ ಬರುವುದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಆರಂಭಿಸಬೇಕೆಂಬ ಬೇಡಿಕೆ ಬಂದಿದೆ. ಆದರೆ ಶಿವಮೊಗ್ಗದಲ್ಲಾದರೂ ಲ್ಯಾಬ್ ಆರಂಭಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಸಾಗರ ಮತ್ತು ಹೊಸನಗರ ಎಪಿಎಂಸಿಗಳನ್ನು ವಿಲೀನ ಮಾಡಲಾಗುತ್ತದೆ ಎಂಬ ಗೊಂದಲ ರೈತ ಸಮುದಾಯದಲ್ಲಿ ಉಂಟಾಗಿತ್ತು. ಆದರೆ ಸರ್ಕಾರ ಈ ಪ್ರಸ್ತಾವನೆಯನ್ನು ಕೈ ಬಿಟ್ಟಿದೆ. ಇದರಿಂದಾಗಿ ಆಯ ನಗರದ ರೈತರಿಗೆ ಕೃಷಿ ಹುಟ್ಟುವಳಿಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ ಎಂದರು.
ಕರೂರು ಜಾಗವನ್ನು ಬಫರ್ ಜೋನ್ ಮಾಡುವ ಪ್ರಸ್ತಾವನೆಯನ್ನು ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಅಣ್ಣಪ್ಪ ಇದ್ದರು.