ಆರೆಸ್ಸೆಸ್ನವರು ಭಾರತೀಯರಾ, ಅದೇನು ನಮ್ಮ ದೇಶದ್ದಾ,ಅವರೇನು ದ್ರಾವಿಡರೇ, ದ್ರಾವಿಡರಷ್ಟೇ ಈ ದೇಶದವರು. ಈ ಪ್ರಶ್ನೆಗಳನ್ನೂ ನಾವು ಕೇಳಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಶುಕ್ರವಾರ ನಡೆದ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯ ಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡಗೇವಾರ್ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್ಸಿಂಗ್ ಪಠ್ಯವನ್ನು ತೆಗೆದು ಹೆಡಗೇವಾರ್ ಭಾಷಣ ಹಾಕಿದ್ದಾನೆ. ಭಗತ್ಸಿಂಗ್ಗಿಂತ ದೇಶಭಕ್ತ ಬೇಕಾ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇಂತದನ್ನು ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತೆ. ಅದಕ್ಕಾಗಿಯೇ ಚರಿತ್ರೆ ಕೆದಕಲು ಹೋಗಬಾರದು. ಡಾ.ಅಂಬೇಡ್ಕರ್ ಅವರು, ಚರಿತ್ರೆ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು ಎಂದು ಹೇಳಿದ್ದರು. ಆರೆಸ್ಸೆಸ್ನವರಿಗೆ ನಿಜವಾದ ಚರಿತ್ರೆ ಬಗ್ಗೆ ಬಹಳ ಭಯ ಇದೆ. ಅದಕ್ಕಾಗಿಯೇ ಇತಿಹಾಸ ತಿರುಚುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನೆಹರೂ ಅವರು ವಿಜ್ಞಾನ ಹಾಗೂ ತಂತ್ರಜ್ಞಾನ, ಪ್ರಜಾತಂತ್ರದ ಆಧಾರದಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಜ್ಞಾನಿಕ ಮನೋಧರ್ಮ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಈ ಕ್ಷೇತ್ರಗಳಲ್ಲಿನ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ಮತ್ತು ಜಾತಿ ಸಂಘರ್ಷಗಳ ಬಗ್ಗೆಯೇ ಮಾತನಾಡುತ್ತಾ ದೇಶದ ದಾರಿ ತಪ್ಪಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.