ಇತ್ತೀಚೆಗೆ ಭಾರತದ ಚಿತ್ರಣ ಬದಲಾಗಿದ್ದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಇಂದು ಭಾರತದೊಂದಿಗೆ ಕೈಜೋಡಿಸಲು ಮುಂದಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ಆಗಮಿಸಿ ಮಾತನಾಡಿದ ಅವರು,
ಈ ಹಿಂದೆ ಭಾರತವನ್ನು ಗಂಭೀರವಾಗಿ ಪರಿಗಣಿಸದೆ ಇದ್ದವರೂ ಈಗ ಭಾರತದತ್ತ ಒಲವು ತೋರುತ್ತಿದ್ದಾರೆ. ಕಾಲ ಬದಲಾಗಿದೆ. ಭಾರತದ ಸಲಹೆ, ಸೂಚನೆಗಳಿಗೆ ಎಲ್ಲೆಡೆ ಗೌರವ ಸಿಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ದೇಶದ ಗೌರವ, ಪ್ರತಿಷ್ಠೆ ಹೆಚ್ಚಾಗಿದೆ ಎಂದರು.
ತಾವು ಈಚೆಗೆ ಅಮೆರಿಕಕ್ಕೆ ಭೇಟಿ ನೀಡಿದಾಗ ಅಲ್ಲಿನ ನೌಕಾಪಡೆ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದು, ಭಾರತದ ಜತೆ ಕೈಜೋಡಿಸಲು ಅವರು ಬಯಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ ಮತ್ತು ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ ಸಿಂಗ್, ರಿಯರ್ ಅಡ್ಮಿರಲ್ ಅತುಲ್ ಆನಂದ್, ಶಾಸಕಿ ರೂಪಾಲಿ ನಾಯ್ಕ ಮತ್ತಿತರರು ಇದ್ದರು.