ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ಜೆಡಿಎಸ್ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿವೆ. ಕಳೆದ ದಿನ ಕಾಂಗ್ರೆಸ್ ತಮಗೆ ಲಭಿಸಿರುವ 2 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು.
ಪರಿಷತ್ತಿನ 7 ಸ್ಥಾನಗಳ ಪೈಕಿ ಕಾಂಗ್ರೆಸ್ಗೆ 2 ಸ್ಥಾನಗಳು ಸಿಗಲಿವೆ. ಆ 2 ಸ್ಥಾನಗಳಲ್ಲಿ ಒಂದನ್ನು ಹಿಂದುಳಿದ ವರ್ಗ ಮತ್ತು ಇನ್ನೊಂದನ್ನು ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಕೊಡಲು ಸಿದ್ದರಾಮಯ್ಯ ಹೈಕಮಾಂಡ್ಗೆ ಮನವಿ ಮಾಡಿದ್ದರು ಎನ್ನಲಾಗಿತ್ತು. ಆದರೆ, ಹಿರಿಯ ನಾಯಕರು ಸೂಚಿಸಿದ್ದ ಹೆಸರುಗಳಿಗೆ ಮಣೆ ಹಾಕದ ಕಾಂಗ್ರೆಸ್ ಹೈಕಮಾಂಡ್ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿ ಅಚ್ಚರಿ ಮೂಡಿಸಿದೆ. ಕೆ. ಅಬ್ದುಲ್ ಜಬ್ಬಾರ್ ಮತ್ತು ಎಂ. ನಾಗರಾಜ್ ಯಾದವ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.
ಇದೇ ದಾರಿ ಹಿಡಿದಿರುವ ಬಿಜೆಪಿ, ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದೆ. ಈ ಹಿಂದೆ ಬಿ.ಎಸ್ ಯಡಿಯೂರಪ್ಪ ತಮ್ಮ ಮಗ ಬಿ.ವೈ ವಿಜಯೇಂದ್ರಗೆ ಟಿಕೆಟ್ ನೀಡುವಂತೆ ಲಾಬಿ ಮಾಡಿದ್ದರು ಎನ್ನಲಾಗಿತ್ತು. ಆದರೆ, ಈಗ ಹಿರಿಯರ ಮಾತಿಗೆ ಸೊಪ್ಪು ಹಾಕದ ಬಿಜೆಪಿ ಹೈಕಮಾಂಡ್, ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್, ಕೇಶವಪ್ರಸಾದ್, ಲಕ್ಷ್ಮಣ ಸವದಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ. ಈ ಬೆಳವಣಿಯನ್ನು ಹಲವರು ಸಂತೋಷದಿಂದ ಸ್ವಾಗತಿಸಿದ್ದಾರೆ. ಇನ್ನು ಪಶ್ಚಿಮ ಕ್ಷೇತ್ರದಿಂದ ಬಸವರಾಜ ಹೊರಟ್ಟಿ ಅಭ್ಯರ್ಥಿಯಾಗಿದ್ದಾರೆ.
ಇನ್ನು ಜೆಡಿಎಸ್ನಿಂದ ಕೊನೆ ಹಂತದಲ್ಲಿ ಶರವಣಗೆ ಜೆಡಿಎಸ್ ಟಿಕೆಟ್ ನೀಡಿದೆ. ನಿನ್ನೆ
ಬೆಳಗ್ಗೆ 11.30ಕ್ಕೆ ಶರವಣ ಅವರು ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಯಾಗಿದೆ.
ಸದ್ಯ ವಿದ್ಯಮಾನದ ಪ್ರಕಾರ ಈ ಎಲ್ಲ ಅಭ್ಯರ್ಥಿಗಳೂ ಅವಿರೋಧ ಆಯ್ಕೆ ಆಗುವ ಸಂಭವ ಹೆಚ್ಚಾಗಿದೆ ಎಂದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ.