ಪಂಜಾಬ್ನಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಕಮಿಷನ್ ತಗೆದುಕೊಂಡ ಆರೋಪದ ಮೇಲೆ ಅಲ್ಲಿನ ಸಚಿವರೊಬ್ಬರನ್ನು ವಜಾಗೊಳಿಸಲಾಗಿದೆ.
ವಿಶೇಷವೆಂದರೆ, ಖುದ್ದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಈ ಕ್ರಮ ಕೈಗೊಂಡಿದ್ದು ಆರೋಪಿ ಮಂತ್ರಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಭಗವಂತ್ ಮನ್ ಜನರು ನಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಅಧಿಕಾರ ಕೊಟ್ಟಿದ್ದಾರೆ. ನಾವು ಕೂಡ ಭ್ರಷ್ಟಾಚಾರ ಮುಕ್ತ ಸಿದ್ದಾಂತದ ಮೇಲೆಯೇ ನಿಂತಿದ್ದೇವೆ. ಭಾರತ ಮಾತೆಯ ಮಗನಾಗಿ ಅರವಿಂದ್ ಕೇಜ್ರಿವಾಲ್ ಇದ್ದಾರೆ. ಸೈನಿಕನಂತೆ ನಾನು ಇದ್ದೀನಿ. ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಿವಿ. ಅದು ಒಂದು ಪರ್ಸೆಂಟ್ ಇದ್ರೂ ನಾವು ಸಹಿಸಲ್ಲ ಎಂದಿದ್ದಾರೆ.
ಇದರೊಂದಿಗೆ ಪಂಜಾಬ್ ಸಿಎಂ ಅವರ ಈ ಕ್ರಮದ ಬಗ್ಗೆ ದೆಹಲಿ ಸಿಎಂ ಆಪ್ ವರಿಷ್ಠ ಅರವಿಂದ್ ಕೇಜ್ರಿವಾಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದು ನನ್ನ ಕಣ್ಣಲ್ಲಿ ನೀರು ತಂದಿದೆ. ಅಂದ್ರೆ ಆನಂದ ಬಾಷ್ಪ ಬಂದಿದೆ. ಇಡೀ ದೇಶಕ್ಕೆ ಇವತ್ತು ಹೆಮ್ಮೆಯಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ.
ಅಂದಹಾಗೆ, ಕಮಿಷನ್ ಕೇಳಿ ತಮ್ಮ ಸರ್ಕಾರದಿಂದಲೇ ವಜಾಗೊಂಡವರು ಪಂಜಾಬ್ನ ಆರೋಗ್ಯ ಮಂತ್ರಿ ವಿಜಯ್ ಸಿಂಗ್ಲಾ. ಟೆಂಡರ್ನಲ್ಲಿ ಒಂದು ಪರ್ಸೆಂಟ್ ಕಮಿಷನ್ ಕೇಳಿದ್ದರು ಎಂದು ಅಲ್ಲಿನ ಅಧಿಕಾರಿಗಳು ಹಿಂದಿನ ವಾರವಷ್ಟೇ ಸಿಎಂ ಭಗವಂತ್ಗೆ ದೂರು ನೀಡಿದ್ದರಂತೆ. ಇದರನ್ವಯ ಆರೋಪದ ಬಗ್ಗೆ ಗುಪ್ತವಾಗಿ ತನಿಖೆ ಮಾಡಲು ಆದೇಶ ನೀಡಲಾಗಿತ್ತು. ಇದರಲ್ಲಿ ಆರೋಪಿ ಮಂತ್ರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿ ಸಿಕ್ಕಿತ್ತು.
ಹೀಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾದ ಮನ್, ತಮ್ಮ ಸಂಪುಟದ ಸಚಿವನನ್ನೇ ಕೆಲಸದಿಂದ ಡಿಸ್ಮಿಸ್ ಮಾಡಿದ್ದಾರೆ. ಈ ಬಗ್ಗೆ ಜನತೆಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಂಪುಟದ ಇತರ ಸದಸ್ಯರಿಗೂ ವಾರ್ನಿಂಗ್ ಕೊಟ್ಟಿದ್ದು ಎಚ್ಚರ ತಪ್ಪಿದರೆ ತಮಗೂ ಅದೇ ಗತಿ ಎಂದು ಖಡನ್ ಸೂಚನೆ ನೀಡಿದ್ದಾರೆ.