ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಕುಸಿತದ ನಂತರ ಅವಶೇಷಗಳಡಿ ಸಿಲುಕಿರುವ ಒಂಬತ್ತು ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಪುನರಾರಂಭವಾಗಿದೆ.
ಪಶ್ಚಿಮ ಬಂಗಾಳದ ಜಾದವ್ ರಾಯ್ (23), ಗೌತಮ್ ರಾಯ್ (22), ದೀಪಕ್ ರಾಯ್ (33) ಮತ್ತು ಪರಿಮಳ್ ರಾಯ್ (38), ಅಸ್ಸಾಂನ ಶಿವ ಚೌಹಾಣ್ (26), ನೇಪಾಳಿ ನಾಗರಿಕರಾದ ನವರಾಜ್ ಚೌಧರಿ (26) ) ಖುಷಿ ರಾಮ್ (25), ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಾದ ಮುಜಾಫರ್ (38) ಮತ್ತು ಇಸ್ರತ್ (30) ಸುರಂಗದಲ್ಲಿ ಸಿಲುಕಿದ್ದು, ಅವರು ಜೀವಂತವಾಗಿರುವದು ಅನುಮಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 10.15 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಖೂನಿ ನಲ್ಲಾ ಬಳಿ ಹೆದ್ದಾರಿಯಲ್ಲಿ ಟಿ 3 ನ ಆಡಿಟ್ ಸುರಂಗವು ಕುಸಿದಿತ್ತು. ಅದರಲ್ಲಿ ಪಶ್ಚಿಮ ಬಂಗಾಳ ಮೂಲದ ಸುೀಧಿರ್ ರಾಯ್ (31) ಎಂಬ ಕಾರ್ಮಿಕ ಸಾವನ್ನಪ್ಪಿದ್ದಾರೆ.
ಮೂವರನ್ನು ರಕ್ಷಿಸಲಾಗಿತ್ತು.
ಸುರಂಗದ ಅವಶೇಷಗಳೊಳಗೆ ಸಿಲುಕಿರುವ 9 ಮಂದಿಯನ್ನು ರಕ್ಷಿಸುವ ಕಾರ್ಯಾಚರಣೆ ಇಂದು ಮುಂಜಾನೆ 5.30 ಕ್ಕೆ ಪ್ರಾರಂಭವಾಗಿದೆ.
ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ ಎಂದು ರಾಂಬನ್ ಜಿಲ್ಲಾಧಿಕಾರಿ ಮುಸ್ಸರತ್ ಇಸ್ಲಾಂ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಮ್ಸು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ನಯೀಮ್-ಉಲ್-ಹಕ್ ಸೇರಿದಂತೆ 15 ಕ್ಕೂ ಹೆಚ್ಚು ರಕ್ಷಕರು ಶುಕ್ರವಾರ ಸಂಜೆ ಹೊಸ ಭೂಕುಸಿತದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದರಿಂದಾಗಿ ಇದು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಗುಡ್ಡದ ಮೇಲಿನ ಕಲ್ಲುಗುಂಡುಗಳು ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಉರುಳಿವೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಮಂದ ಬೆಳಕಿನಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.