ಸೂಕ್ಷ್ಮಜೀವಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಕುರಿತು ಬರುವ ಸೆಪ್ಟೆಂಬರ್ 26-28ರವರೆಗೆ ಇಟಲಿಯ ರೋಮ್ ನಲ್ಲಿ ನಡೆಯಲಿರುವ ಎರಡನೆಯ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್. ಬಿ.ತಿಪ್ಪೇಸ್ವಾಮಿ ಅವರನ್ನು ವಿಶೇಷ ಭಾಷಣಕಾರರಾಗಿ ಆಹ್ವಾನಿಸಲಾಗಿದೆ.
ಚೇಳಿನ ವಿಷದ ಔಷಧೀಯ ಬಳಕೆಯ ಸಾಧ್ಯತೆಯ ಬಗ್ಗೆ ಇತ್ತೀಚೆಗೆ ಪ್ರತಿಷ್ಠಿತ ಎಲ್ಸೇವಿಯರ್ ಸಂಸ್ಥೆಯ “ಮಾಲಿಕ್ಯುಲರ್ ಇಮ್ಯುನೋಲಜಿ” ಜರ್ನಲ್ ನಲ್ಲಿ
ಪ್ರಕಟಿಸಿದ್ದ ಸಂಶೋಧನಾ ಲೇಖನವನ್ನು ಗಮನಿಸಿ ಇವರಿಗೆ ಸಮ್ಮೇಳನದಲ್ಲಿ ವಿಷಯ ತಜ್ಞರಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಸಮ್ಮೇಳನದ ಪ್ರಯಾಣ ಮತ್ತು ವಸತಿಯ ಸಂಪೂರ್ಣ ಆರ್ಥಿಕ ವೆಚ್ಚವನ್ನು ಆಯೋಜಕರು ಭರಿಸಲಿದ್ದಾರೆ.
ಪ್ರೊ. ಎನ್. ಬಿ. ತಿಪ್ಪೇಸ್ವಾಮಿ ಅವರಿಗೆ ಈ ಹಿಂದೆ, ಮಂಗನ ಕಾಯಿಲೆಯ ಕುರಿತ ಸಂಶೋಧನೆಗೆ ಕರ್ನಾಟಕ ಸರ್ಕಾರದ ವಿಜಿಎಸ್ಟಿ ಅನುದಾನ ದೊರಕಿದ್ದು, ಇದೀಗ ರೋಮ್ ನ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ ಮನ್ನಣೆ ದೊರಕಿರುವುದು ವಿಶ್ವವಿದ್ಯಾಲಯದ ಸಂಶೋಧನಾ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕುಲಪತಿ ಪ್ರೊ.ಬಿ. ಪಿ. ವೀರಭದ್ರಪ್ಪ ಮತ್ತು ಕುಲಸಚಿವೆ ಜಿ. ಅನುರಾಧ ಅಭಿನಂದಿಸಿದ್ದಾರೆ.