ಪೋಷಕರಿಂದ ನೇರವಾಗಿ ಮಗುವನ್ನು ದತ್ತು ಪಡೆದು ಪೋಷಿಸುವುದು ಬಾಲ ನ್ಯಾಯ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಮಗುವನ್ನು ದತ್ತು ಪಡೆದ ವೇಳೆ ಬಾಲ ನ್ಯಾಯ ಕಾಯ್ದೆಯ ನಿಯಮ ಪಾಲಿಸಿಲ್ಲ ಎಂಬ ಆರೋಪ ಸಂಬಂಧ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಕೊಪ್ಪಳದ ಝರೀನಾ ಬೇಗಂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಈ ಆದೇಶ ಮಾಡಿದ್ದಾರೆ.
ಮೆಹಬೂಬ್ ಸಾಬ್ ನಬಿಸಾಬ್ ಮತ್ತು ಅವರ ಪತ್ನಿ ಬಾನು ಬೇಗಂ ಎಂಬುವರಿಗೆ 2018ರ ಸೆ.18ರಂದು ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಝರೀನಾ ಬೇಗಂ ಮತ್ತು ಅಬ್ದುಲ್ ಸಾಬ್ ಹುಡೇದಮನಿ ಅವರಿಗೆ ಮಕ್ಕಳು ಇರಲಿಲ್ಲ. ಇದರಿಂದ ಬಾನು ಬೇಗಂ ಅವರಿಂದ ಒಂದು ಮಗುವನ್ನು ಜರೀನಾ ಬೇಗಂ ದಂಪತಿ ದತ್ತು ಪಡೆದು ಸಾಕುತ್ತಿದ್ದರು. ಈ ಕುರಿತು .20 ಛಾಪಾ ಖಾಗದದ ಮೇಲೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆದರೆ, ಪ್ರಕರಣದಲ್ಲಿ ಬಾಲ ನ್ಯಾಯ ಕಾಯ್ದೆ ಸೆಕ್ಷನ್-80 ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಆರ್.ಜಯಶ್ರೀ ನರಸಿಂಹ ಎಂಬುವರು ದೂರು ದಾಖಲಿಸಿದ್ದರು. ಗಂಗಾವತಿ ಠಾಣಾ ಪೊಲೀಸರು ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಅದನ್ನು ಆಧರಿಸಿ ಮ್ಯಾಜಿಸ್ಪ್ರೇಟ್ ಕೋರ್ಚ್ ಸಮನ್ಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್, ಬಾಲ ನ್ಯಾಯ ಕಾಯ್ದೆ (ಆರೈಕೆ ಮತ್ತು ಮಕ್ಕಳ ರಕ್ಷಣಾ)-2015ರ ಸೆಕ್ಷನ್ 80ರಲ್ಲಿ ಮಗು ಅನಾಥವಾಗಿದ್ದರೆ, ನಿರಾಶ್ರಿತವಾಗಿದ್ದರೆ ಅಥವಾ ಬಾಲಮಂದಿರಗಳಿಗೆ ಒಪ್ಪಿಸಿರುವ ಮಗುವಾಗಿದ್ದರೆ ಆ ಮಗುವನ್ನು ದತ್ತು ಪಡೆದ ಸಂದರ್ಭಗಳಲ್ಲಿ ಕಾಯ್ದೆಯ ನಿಯಮಗಳು ಅನ್ವಯವಾಗುತ್ತವೆ ಎಂದು ಅಭಿಪ್ರಾಯಪಟ್ಟಿತು.