ಸಿನಿಮಾ ಜಗತ್ತಿನ ಅದೆಷ್ಟೋ ನಟ ನಟಿಯರು ತಮ್ಮ ನಡೆ ನುಡಿ, ಹಾಗೂ ವ್ಯಕ್ತಿತ್ವದಿಂದ ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿರುತ್ತಾರೆ.
ನಟ-ನಟಿಯರ ಉಡುಗೆ,ತೊಡುಗೆ, ಹವ್ಯಾಸಗಳು, ಅವರ ಸಾಮಾಜಿಕ ಕಾರ್ಯಗಳೂ ಕೂಡ ಅವರ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತವೆ.
ಅದೆಷ್ಟೋ ಜನರು ತಮ್ಮ ನೆಚ್ಚಿನ ನಟ ನಟಿಯರ ಹಾಗೆ ಉಡುಗೆಗಳನ್ನು ತೊಡುತ್ತಾರೆ. ಇದರೊಂದಿಗೆ ಇನ್ನೂ ಕೆಲವರಂತೂ ಅವರು ಯಾವ ಆಹಾರವನ್ನು ಸೇವಿಸುತ್ತಾರೋ ಅದನ್ನೇ ಸೇವಿಸುವವರು ಇದ್ದಾರೆ..
ಸಿನಿಮಾ ನಟ-ನಟಿಯರು ವಿವಿಧ ಬಗೆಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ನಿಜವಾಗಿಯೂ ಆ ಒಂದು ಬಗೆಯ ಉತ್ಪನ್ನವನ್ನು ಉಪಯೋಗಿಸುತ್ತಾರೊ ಇಲ್ಲವೋ ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೆ, ಕೆಲವು ನಟ ನಟಿಯರು ಹಣದಾಸೆಗೆ ಜಾಹೀರಾತಿಗೆ ಒಪ್ಪಿಕೊಂಡರೆ, ಇನ್ನೂ ಕೆಲವರು ಪ್ರೇಕ್ಷಕರಿಗೆ ಕೆಟ್ಟ ಸಂದೇಶವನ್ನು ನೀಡಬಾರದು, ಸುಳ್ಳು ವಿಷಯವನ್ನು ತಲುಪಿಸ ಬಾರದು ಎನ್ನುವ ನಿಟ್ಟಿನಲ್ಲಿ ಅದೆಷ್ಟು ಕೋಟಿ ಹಣದ ಜಾಹೀರಾತನ್ನು ತಳ್ಳಿಹಾಕುತ್ತಾರೆ.
ಈಗ ಈ ಸಾಲಿಗೆ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಕೂಡ ಸೇರಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಇತ್ತೀಚಿಗಷ್ಟೇ ಅಕ್ಷಯ್ ಕುಮಾರ್, ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಈ ಮೂವರೂ ಸೂಪರ್ಸ್ಟಾರ್ಗಳು ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಟ್ರೋಲ್ ಆಗುತ್ತಿದ್ದಾರೆ. ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕವಂತೂ ಈ ಮೂವರು ಬಾಲಿವುಡ್ ನಟರನ್ನೂ ‘ಗುಟ್ಕಾ ಗ್ಯಾಂಗ್’ ಎಂದೇ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸುವುದು ನಿಮಗೆಲ್ಲಾ ಗೊತ್ತೇ ಇದೆ.
ಜಾಹೀರಾತಿನಿಂದ ಬಂದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳುವುದಾಗಿಯೂ ಹೇಳಿದ್ದರು. ಹೀಗಿದ್ದರೂ, ಇತ್ತೀಚೆಗೆ ಹಿಂದಿ ರಾಷ್ಟ್ರ ಭಾಷೆ ಎಂದಿದ್ದ ಅಜಯ್ ದೇವಗನ್ಗೆ ಬೆಂಬಲಿಸಿ ಅಕ್ಷಯ್ ಮತ್ತೆ ಪೇಚಿಗೆ ಸಿಕ್ಕಿಕೊಂಡಿದ್ದರು.
ಈ ಬೆನ್ನಲ್ಲೇ ಮತ್ತೆ ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಇದೇ ಪಾನ್ ಮಸಾಲ ಜಾಹೀರಾತಿಗೆ ಟ್ರೋಲ್ ಆಗಿದ್ದರು. ಈಗ ಯಶ್ ಇಂತಹದ್ದೇ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿ ಮೆಚ್ಚುಗೆ ಗಳಿಸಿದ್ದಾರೆ.
ಹೌದು.. ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್ ತೆಗೆದುಕೊಂಡು ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೆಜಿಎಫ್ 2′ ಅದ್ಧೂರಿ ಯಶಸ್ಸಿನ ಬಳಿಕ ಪಾನ್ ಮಸಲಾ ಹಾಗೂ ಎಲೈಚಿ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಯಶ್ಗೆ ಕೇಳಲಾಗಿತ್ತು. ಆದರೆ, ಯಶ್ ಈ ದುಬಾರಿ ಮೌಲ್ಯದ ಜಾಹೀರಾತನ್ನು ತಿರಸ್ಕರಿಸಿದ್ದಾರೆ.
ಕೆಜಿಎಫ್’ ಬಳಿಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಯಶ್, ತಮ್ಮ ಅಭಿಮಾನಿಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಈ ಜಾಹೀರಾತನ್ನು ಕೈ ಬಿಟ್ಟಿದ್ದಾರೆ ಎಂದು ಟ್ಯಾಲೆಂಟ್ ಮ್ಯಾನೆಜ್ಮೆಂಟ್ ಏಜೆನ್ಸಿ ಬಹಿರಂಗ ಪಡಿಸಿದೆ.
ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತದೆ ಎನ್ನುವ ಮಾತನ್ನು ನೀವೆಲ್ಲ ಕೇಳ್ತೀರಾ.. ಹಣಕಾಸಿಗೆ ಅದೆಷ್ಟೋ ಜಾಹೀರಾತುಗಳಲ್ಲಿ ನಟಿಸಿ, ಸುಳ್ಳು ಮಾಹಿತಿಯನ್ನು ನೀಡುವವರ ಮಧ್ಯೆ ಯಶ್ ಅವರ ಈ ನಿರ್ಧಾರದಿಂದ ರಾಕಿಂಗ್ ಸ್ಟಾರ್ ಮತ್ತಷ್ಟು ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದಾರೆ.