ಮನುಷ್ಯನ ಅಗತ್ಯಗಳಿಗೆ ಎಲ್ಲವನ್ನೂ ನೀಡುವ, ಅವರ ಆರೋಗ್ಯವನ್ನು ವೃದ್ಧಿಸುವ ಹಾಗೂ ರೈತರ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ಗೋಮಾತೆ ಧನ್ಯಳು, ಮಾನ್ಯಳು ಎಂದು ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಜಿಲ್ಲಾ ಪಂಚಾಯತ್ ಶಿವಮೊಗ್ಗ, ಶಿವಮೊಗ್ಗ ಹಾಲು ಒಕ್ಕೂಟ ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಸರ್ಕಾರಿ ನೌಕರರ ಸಭಾಭವನದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಏರ್ಪಡಿಸಲಾಗಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಹಾಗೂ ಜಿಲ್ಲೆಯ ಪಶುವೈದ್ಯರಿಗೆ ಜಿಲ್ಲಾ ಮಟ್ಟದ ತಾಂತ್ರಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉಪಕಸುಬನ್ನಾಗಿಸಿಕೊಂಡಿರುವ ಹಾಗೂ ರೈತರು ಅವಲಂಬಿಸಿರುವ ಹೈನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಾಣಿಕೆಗೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪಶುವೈದ್ಯರ ಪಾತ್ರ ಪ್ರಮುಖವಾದುದ್ದಾಗಿದೆ ಎಂದ ಅವರು, ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ ರೂ.2 ಪ್ರೋತ್ಸಾಹಧನವನ್ನು ನೀಡಲಾಗುತ್ತಿತ್ತು. ಪ್ರಸ್ತುತ ಈ ಪ್ರೋತ್ಸಾಹಧನವನ್ನು ರೂ.5ಕ್ಕೆ ಹೆಚ್ಚಿಸಲಾಗಿದೆ. ಭಾರತದ ಜಿಡಿಪಿ.ಗೆ ಕೃಷಿಯಿಂದ ಶೇ.16ರಷ್ಟು ಕೊಡುಗೆ ನೀಡಲಾಗುತ್ತಿದೆ. ಇದರಲ್ಲಿ ಶೇ.25ರಷ್ಟು ಪಶುಪಾಲಕರ ಪಾತ್ರವಿದೆ ಎಂದವರು ನುಡಿದರು.
2006ರಲ್ಲಿ ಜಿಲ್ಲೆಯಲ್ಲಿ ಪಶುವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಿ, ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ಇದರಿಂದಾಗಿ ರೈತರಿಗೆ ನೆರವು ದೊರೆಯಲಿದೆ. ದೇಶವು ಜಾನುವಾರು ಸಂಖ್ಯೆಯಲ್ಲಿ ಮತ್ತು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ದಿನಂಪ್ರತಿ 18 ಬಿಲಿಯನ್ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಕರ್ನಾಟಕ ರಾಜ್ಯ ಉತ್ಪಾದನೆಯಲ್ಲಿ 8ನೇ ಸ್ಥಾನದಲ್ಲಿರುವುದು ಹರ್ಷದ ಸಂಗತಿ ಎಂದರು.
ಪಶುಪಾಲಕರ ಅನುಕೂಲಕ್ಕಾಗಿ ಪಶುಗಳಿಗೆ ಅಂಬುಲೆನ್ಸ್ ಪ್ರಾರಂಭಿಸಿದೆ. ಗೋಸಂರಕ್ಷಣಾ ಕಾಯ್ದೆ-2020ಅನ್ನು ಜಾರಿಗೊಳಿಸಲಾಗಿದೆ.
ಇದರಿಂದಾಗಿ ವಯಸ್ಸಾದ ಜಾನುವಾರುಗಳನ್ನು ಸಂರಕ್ಷಿಸಲು ಜಿಲ್ಲೆಗೊಂದರಂತೆ ಗೋಶಾಲೆ ಪ್ರಾರಂಭಿಸಲು ಚಿಂತನೆ ನಡೆಸಲಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ. ಮೈಸೂರಿನ ಪಿಂಜಾರಿಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ಯೋಜನೆಯಡಿಯಲ್ಲಿ ಗೋಶಾಲೆಗಳ ಪ್ರತಿ ಗೋವಿಗೆ ನಿರ್ವಹಣಾ ವೆಚ್ಚವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಪಶುಪಾಲನಾ ಇಲಾಖೆ ಆರಂಭವಾದಾಗಿನಿಂದ ನೆನೆಗುದಿಗೆ ಬಿದ್ದಿದ್ದ ಇಲಾಖಾ ಪುನಃರಚನೆಯನ್ನು ಮಾಡಿ, ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ, ಪಶುವೈದ್ಯಾಧಿಕಾರಿಗಳ ಹುದ್ದೆಯನ್ನು ಗುಂಪು ಬಿ. ಯಿಂದ ಎ. ಗುಂಪಿಗೆ ಮೇಲ್ದರ್ಜೆಗೇರಿಸಲಾಗಿದೆ. ಹೊಸ ಹುದ್ದೆಗಳನ್ನು ಸೃಜಿಸಿ ಮುಂಬಡ್ತಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪಶು ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲವನ್ನು ಗಮನಿಸಿ, ಅದಕ್ಕೆ ಪೂರಕವಾಗಿ ಸಹಕಾರ ನೀಡಲಾಗುವುದು ಎಂದರು.
ದೇಶದಾದ್ಯಂತ ಗೋಮಾತೆಯನ್ನು ಮಾತೃ ಸ್ಥಾನದಲ್ಲಿಟ್ಟು ಪೂಜನೀಯ ಭಾವದಿಂದ ಕಾಣಲಾಗುತ್ತಿದೆ. ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳನ್ನು ಕಾಣುವ ನಾವು ಗೋರಕ್ಷಣೆಗೆ ಮುಂದಾಗುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಗೋವುಗಳ ಸೇವೆ ಅವಶ್ಯವಿರುವಂತೆಯೇ ಪಶುವೈದ್ಯರ ಬೇಡಿಕೆಯೂ ಹೆಚ್ಚಿದೆ. ಗೋವುಗಳ ಸೇವೆ ಮಾಡುವ ಪಶುವೈದ್ಯರ ಸೇವೆ ಅಭಿನಂದನೀಯ. ಕಾಲಕಾ¯ಕ್ಕೆ ಬದಲಾಗುತ್ತಿರುವ ವ್ಯವಸ್ಥೆಗೆ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಪಶು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಪಶು ಸೇವೆಗೆ ಸಂಬಂಧಿಸಿದಂತೆ ಆಹ್ವಾನಿತ ತಜ್ಞರಿಂದ ತಾಂತ್ರಿಕ ವಿಚಾರ ಸಂಕಿರಣ ಹಾಗೂ ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರುದ್ರೇಗೌಡರು, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಬಿ.ಯಲಿ ಅವರು ಉಪಸ್ಥಿತರಿದ್ದರು.