ಬೆಂಬಲ ಬೆಲೆ ಯೋಜನೆಯಡಿ ತುಮಕೂರಿನ ಜಿಲ್ಲೆಯ ರೈತರಿಂದ ರಾಗಿ ಖರೀದಿ ಮತ್ತೆ ಆರಂಭವಾಗಿದ್ದರೂ ಆ ಜಿಲ್ಲೆಯ 8 ಕೇಂದ್ರಗಳಲ್ಲಿ ನೋಂದಣಿಯಾಗದೆ ರೈತರು ಕಷ್ಟಪಡುತ್ತಿದ್ದಾರೆ.
ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ಹುಳಿಯಾರು, ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ಮಧುಗಿರಿ ಎಪಿಎಂಸಿ ಪ್ರಾಂಗಣಗಳಲ್ಲಿ ಜಮಾಯಿಸಿದ್ದ ಸಾವಿರಾರು ರೈತರು ನೋಂದಣಿಯಾಗದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ರಾಗಿ ಮಾರುವ ಆತುರದಲ್ಲಿರುವ ರೈತರು ಕೃಷಿ ಇಲಾಖೆಯಿಂದ ಪಡೆದುಕೊಂಡಿರುವ ಫೂಟ್ ನಂಬರ್ ಸಮೇತರಾಗಿ ಆಯಾ ಖರೀದಿ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಖರೀದಿ ಕೇಂದ್ರದ ಬಾಗಿಲು ಕೂಡ ತೆರೆಯದೇ ರೈತರಿಗೆ ಮಾಹಿತಿ ನೀಡದೆ ಸಿಬ್ಬಂದಿ ಕಾಣೆಯಾಗಿದ್ದರು. ಸರ್ಕಾರ ಈ ಹಿಂದಿನ ಮಾರ್ಗಸೂಚಿಯಂತೆ 4 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿಗೆ ಮುಂದಾಗಿರುವುದು ಶೇ .60 ರೈತರನ್ನು ಕಂಗಾಲಾಗಿಸಿದೆ. ಆತಂಕದಿಂದಲೇ ಖರಿದೀ ಕೇಂದ್ರದ ಮುಂಭಾಗ ಅಳಲು ತೋಡಿಕೊಂಡರು.
ರಾಜ್ಯದಲ್ಲಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲು ಅವಕಾಶ ಕಲ್ಪಿಸಿದೆ. 1,14 ಲಕ್ಷ ಮೆ.ಟನ್ ರಾಗಿ ಖರೀದಿಗೆ ನೋಂದಣಿಯಾದ ಕೂಡಲೇ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂಬ ಆತಂಕದಿಂದ ಒಮ್ಮೆಲೆ ಸಾವಿರಾರು ಸಂಖ್ಯೆಯಲ್ಲಿ ರೈತರು ನೋಂದಣಿಗೆ ಮುಗಿಬಿದ್ದಿದ್ದಾರೆ.
ಎಪಿಎಂಸಿ ಸಿಬ್ಬಂದಿ ತಮಗೆ ಬೇಕಾದವರಿಗೆ ನೋಂದಣಿ ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳೂ ಬಂದಿದೆ.
ಈ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ಜಿಲ್ಲೆಯಲ್ಲೆಡೆ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.