ರಾಜ್ಯ ವಿಧಾನಸಭೆ ಚುನಾವಣೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯದವರು ಪೂರಕ ವಾತಾವರಣವನ್ನು ಸೃಷ್ಟಿಮಾಡುತ್ತಿದ್ದಾರೆ ಎನಿಸುತ್ತಿದೆ. ಅಮ್ ಆದ್ಮಿಯ ಮುಖಂಡ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶದಲ್ಲಿ ಮಾತನಾಡುತ್ತಾ, ತಮ್ಮ ರಾಜ್ಯದಲ್ಲಿ ಉಚಿತ ವಿದ್ಯುತ್ ಮತ್ತು ನೀರಿನ ಬಗ್ಗೆ ತಿಳಿಸಿದ್ದರು.
ಈಗ ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿ ಬಸವರಾಾಜ ಬೊಮ್ಮಾಯಿ ಅವರು ಎಸಿ ಎಸ್ಟಿ ಸಮುದಾಯಕ್ಕೆ ಉಚಿತ ವಿದ್ಯುತ್ ನೀಡುವ ಯೋಜನೆಯಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ಬಾಗಲಕೋಟೆಯ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಮಹತ್ವದ ಯೋಜನೆಯ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
ಎಸ್ ಸಿ ಎಸ್ಟಿ ಸಮುದಾಯಕ್ಕೆ ತಿಂಗಳಿಗೆ 75 ಯೂನಿಟ್ಗಳ ವಿದ್ಯುತ್ ಉಚಿತವಾಗಿ ನೀಡಲು ಯೋಜನೆ ರೂಪಿಸಲಾಗ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿರುವ ಸಾಲಟ್ಟಿ ಶಿವಲಿಂಗೇಶ್ವರ ಹಾಗೂ ಮಂಟೂರ ಮಹಾಲಕ್ಷ್ಮೀ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಮುಧೋಳ ನಗರದ ಆರ್ ಎಂಜಿ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ವಿವಿಧ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮುಧೋಳದ ಜನರ ನಾಡಿಮಿಡಿತ ಅರಿತಿರುವ ಸಚಿವ ಗೋವಿಂದ ಕಾರಜೋಳ ಅವರು ಈ ಭಾಗದ ಎಲ್ಲ ಬೇಕು ಬೇಡಿಕೆಗಳನ್ನು ಪೂರೈಸುವತ್ತ ಹೆಚ್ಚು ಗಮನ ಹರಿಸಿದ್ದಾರೆ.
ನೆಲ, ಜಲ, ಭಾಷೆ ಅಭಿವೃದ್ಧಿಗಾಗಿ ನಾವು ಯಾವುದೇ ರೀತಿಯ ರಾಜಕಾರಣಕ್ಕೆ ಮುಂದಾಗುವುದಿಲ್ಲ. ಸರ್ವಜನರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತದೆ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಸ್ರ್ತೀಶಕ್ತಿ ಅಭಿವೃದ್ಧಿಗೆ ಆಯಂಕರ್ ಬ್ಯಾಂಕಿಂಗ್, ಹಾಲು ಉತ್ಪಾದಕರಿಗೆ ನಂದಿನಿ ಕ್ಷೀರ ಬ್ಯಾಂಕ್, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲರ ಮಾಸಾಶನ ಹೆಚ್ಚಳದಂತಹ ಅನೇಕ ರೀತಿ ಅಭಿವೃದ್ಧಿಯ ಕಾರ್ಯನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಪರಿಶಿಷ್ಟ ಜಾತಿ, ಪಂಗಡದವರಿಗಾಗಿ 75 ಯೂನಿಟ್ ವಿದ್ಯುತ್ ಉಚಿತ ವಿತರಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.