ಓದಿದ್ದು ತಲೆಗೆ ಹೋದರೆ ಸಾಲದು ಮನಸ್ಸಿಗೂ ಹೋಗಬೇಕು.ಆಗ ಪರೀಕ್ಷೆ ಎದುರಿಸಲು ಸ್ವಲ್ಪವೂ ಕಷ್ಟವಾಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಅವರು ಅಭಿಪ್ರಾಯಪಟ್ಟಿದ್ದಾರೆ.
ದಾವಣಗೆರೆಯ ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಮತ್ತು ಶ್ರೀ ಶಾರದಾ ಪೂಜಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಅವರು ಪಾಠಗಳನ್ನು ಓದುವಾಗ ಅರ್ಥಮಾಡಿಕೊಳ್ಳುತ್ತಾ ಓದಿದಾಗ ಅದು ಕೇವಲ ತಲೆಯಲ್ಲಿ ಕೂರದೆ ಮನಸ್ಸಿನೊಳಗೂ ಮುಟ್ಟುತ್ತದೆ. ಹೀಗೆ ಮನನವಾದ ವಿಷಯಗಳು ಪರೀಕ್ಷೆಯಲ್ಲಿ ಸುಲಭವಾಗಿ ಹೊರಬರುತ್ತವೆ. ಇದರಿಂದ ಪರೀಕ್ಷೆಯಲ್ಲಿ ಭಯವಿರುವುದಿಲ್ಲ. ಮೊದಲು ಓದಬೇಕೆನ್ನುವ ಮನಸ್ಥಿತಿ ತಂದುಕೊಂಡು, ಓದುವುದನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಮರೆತುಹೋಗುವ ಅಂಶಗಳನ್ನು ಗುರುತಿಸಿ ಬರೆದುಕೊಳ್ಳಬೇಕು. ಪುನಹ ಓದಿದಾಗ ಪಾಠಗಳು ಸಂಪೂರ್ಣವಾಗಿ ಮನನವಾಗುತ್ತದೆ ಎಂದು ಮಂಜುನಾಥ್ ಅವರು ಹೇಳಿದರು.
ಪದವಿಪೂರ್ವ ಶಿಕ್ಷಣ ಅವಧಿಯು ಒಂದು ಪರ್ವಕಾಲವಾಗಿದೆ. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ನಿರೀಕ್ಷೆ, ತಂದೆ-ತಾಯಿಗಳ ನಿರೀಕ್ಷೆ, ಸಮಾಜದ ನಿರೀಕ್ಷೆ, ರಾಷ್ಟ್ರದ ನಿರೀಕ್ಷೆಯೊಂದಿಗೆ ಭಾರತದ ವಿದ್ಯಾರ್ಥಿಗಳು ವಿಶ್ವದ ನಿರೀಕ್ಷೆಗೂ ತಕ್ಕನಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿರುವ ಮಹತ್ವವನ್ನು ಉದಾಹರಣೆಗಳ ಸಹಿತ ಮಂಜುನಾಥ್ ಅವರು ವಿವರಿಸಿದರು.
ಸಮಾಜ ಪರಿವರ್ತನೆಗೆ ಶಿಕ್ಷಣವೇ ಸಮರ್ಥ ಸಾಧನ ಎಂಬುದರ ಮಹತ್ವ ಅರಿತ ಸಿರಿಗೆರೆಯ ಹಿರಿ ಜಗದ್ಗುರುಗಳು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ಕೊಟ್ಟಿದ್ದನ್ನು ಸ್ಮರಿಸಿದ ಎಚ್.ಬಿ. ಮಂಜುನಾಥ ಅವರು, ಭಾರತದ ವಿದ್ಯಾರ್ಥಿಗಳ ಬುದ್ಧಿಮತ್ತೆಯು ವಿಶ್ವದ ಬೇರೆಲ್ಲ ರಾಷ್ಟ್ರಗಳ ವಿದ್ಯಾರ್ಥಿಗಳಿಗಿಂತ ಹೆಚ್ಚಿನದಾಗಿದೆ. ಆಧುನಿಕವಾದ ವಿದ್ಯುನ್ಮಾನ ಸಾಧನಗಳನ್ನು ಮನರಂಜನೆಗಾಗಿ ಬಳಸದೇ ಸದುಪಯೋಗಪಡಿಸಿಕೊಂಡು ವಿಶ್ವದಲ್ಲಿ ದೊಡ್ಡ ಸಾಧನೆಯನ್ನು ನಮ್ಮ ವಿದ್ಯಾರ್ಥಿಗಳು ಮಾಡಬೇಕು ಎಂದು ಎಚ್. ಬಿ.ಮಂಜುನಾಥ್ ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್.ಪ್ರದೀಪರವರು ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ಪರೀಕ್ಷಾ ಕೊಠಡಿಯಲ್ಲಿನ ನೀತಿ,ನಿಯಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಅನುಭವ ಮಂಟಪ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಕುಮಾರ್ ಸಹ ಉಪಸ್ಥಿತರಿದ್ದರು.
ಅಧ್ಯಾಪಕಿ ರಾಧಾ ಜಿ. ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ವಿದ್ಯಾರ್ಥಿನಿಯರಾದ ಮನುಶ್ರೀ, ಕೀರ್ತನಾ ಹಾಡಿದರು. ಶೈಕ್ಷಣಿಕ ಅನುಭವಗಳನ್ನು ವಿದ್ಯಾರ್ಥಿಗಳಾದ ವಿಶಾಲ್, ಸೃಜನ್, ಕುಶಾಲ್, ಪ್ರಜ್ವಲ್, ಪ್ರೇರಣಾ, ಭಾವನಾ ಮುಂತಾದವರು ಹಂಚಿಕೊಂಡರು.