ನಾನು ಡಮ್ಮಿ ಗೃಹಸಚಿವ ಅಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ. ಯಾವ ಪ್ರಕರಣದಲ್ಲೂ ಗೃಹ ಇಲಾಖೆ ವಿಳಂಬ ನೀತಿ ಅನುಸರಿಸಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜಕಾರಣದಲ್ಲಿ ಟೀಕೆ ಮಾಡಲೂ ಒಂದು ಇತಿ-ಮಿತಿ ಇರಬೇಕು. ಎದುರಾಳಿ ಕೂಡಾ ಹೌದು ಎನ್ನುವ ರೀತಿಯಲ್ಲಿ ಟೀಕೆ ಅಥವಾ ಆರೋಪ ಮಾಡಬೇಕು. ಎಲ್ಲ ದುರ್ಘಟನೆಗಳಿಗೂ ತತ್ಕ್ಷಣ ಕ್ರಮವಾಗಿದೆ ಎಂದರು.
ಹಿಂದೆ ನನ್ನದೇ ಕ್ಷೇತ್ರದವರು ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಹಗರಣ ನಡೆಯಲಿಲ್ಲವೇ? ಎಷ್ಟು ಬಾರಿ ಪರೀಕ್ಷೆ ಮುಂದೂಡಲಾಗಿತ್ತು. ಅದೇ ರೀತಿ ಕಾಂಗ್ರೆಸ್ ಸರಕಾರ ಇದ್ದಾಗ ರಾಜ್ಕುಮಾರ್ ನಿಧನವಾಗಿತ್ತು. ಅವರ ಅಂತ್ಯಸಂಸ್ಕಾರ ಸಂದರ್ಭ 6 ಜನ ಮೃತಪಟ್ಟಿದ್ದರು. ಆದರೆ ಪುನೀತ್ ಅಂತ್ಯಸಂಸ್ಕಾರ ವೇಳೆ 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದ್ದರೂ ಯಾವುದೇ ಗಲಾಟೆ ನಡೆಯದಂತೆ ನಮ್ಮ ಸರಕಾರ ಸಮರ್ಥವಾಗಿ ನಿಭಾಯಿಸಿತ್ತು. ತಮ್ಮಲ್ಲಿ ತಪ್ಪಿಟ್ಟುಕೊಂಡು ಕಾಂಗ್ರೆಸ್ನವರು ಮತ್ತೂಬ್ಬರ ಮೇಲೆ ಗೂಬೆ ಕೂರಿಸುವಲ್ಲಿ ನಿರತರಾಗಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು .
ಕಾಂಗ್ರೆಸ್ ಸರಕಾರದಲ್ಲಿ ಗೃಹ ಸಚಿವರನ್ನು ಡಮ್ಮಿಯಾಗಿ ಇಟ್ಟುಕೊಳ್ಳಲಾಗಿತ್ತು.
ಆದರೆ, ಬಿಜೆಪಿ ಸರಕಾರದಲ್ಲಿ ಗೃಹ ಸಚಿವರನ್ನು ಡಮ್ಮಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸರಕಾರದ ಭಾಗವಾಗಿ ಗೃಹ ಖಾತೆಯನ್ನು ಸ್ವತಂತ್ರವಾಗಿ ನಿಭಾಯಿಸುತ್ತಿದ್ದೇನೆ ಎಂದರು.