ಇತ್ತೀಚೆಗೆ ನಿತ್ಯದ ಕೋವಿಡ್ ಪ್ರಕರಣಗಳ ಪ್ರಕಟಣೆ ನಿಲ್ಲಿಸಿದ್ದ ಕೇರಳ ಸರ್ಕಾರ, 5 ದಿನಗಳ ಮೌನದ ಬಳಿಕ ಸೋಮವಾರ ಏಕಾಏಕಿ ರಾಜ್ಯದಲ್ಲಿ 940 ಕೋವಿಡ್ ಪ್ರಕರಣಗಳು ವರದಿಯಾಗಿವೆ ಹಾಗೂ 213 ಸಾವು ಸಂಭವಿಸಿವೆ ಎಂದು ವರದಿ ನೀಡಿದೆ.
5 ದಿನಗಳ ಅಂತರದ ಬಳಿಕ ಕೇಂದ್ರ ಸರ್ಕಾರಕ್ಕೆ ನೀಡಿದ ಈ ವರದಿಯು ದೇಶದ ಕೋವಿಡ್ ದೈನಂದಿನ ಅಂಕಿ ಅಂಶಗಳಲ್ಲಿ ಭಾರೀ ಏರುಪೇರು ಸೃಷ್ಟಿಸಿದೆ.
ಹೀಗಾಗಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಇನ್ನು ಮುಂದೆ ಈ ನಿತ್ಯ ವರದಿ ನಿಡುವಂತೆ ತಾಕೀತು ಮಾಡಿದೆ.
ಈ ಕುರಿತು ಕೇರಳ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ಲವ್ ಅಗರ್ವಾಲ್, ‘ಈ ರೀತಿ ದತ್ತಾಂಶ ನೀಡಿಕೆಯಲ್ಲಿ ಏರುಪೇರು ಮಾಡುವುದು ಸಲ್ಲದು.
ಹೀಗೆ ಕೆಲವು ದಿನಗಳ ಬಳಿಕ ಕೋವಿಡ್ ವರದಿಯನ್ನು ನೀವು ನೀಡಿದ್ದರಿಂದ ಅದು ರಾಷ್ಟ್ರೀಯ ಕೋವಿಡ್ ಅಂಕಿಸಂಖ್ಯೆಗಳ ಮೇಲೆ ಪರಿಣಾಮ ಬೀರಿದೆ.
ದೇಶದ ಕೇಸುಗಳ ಸಂಖ್ಯೆ ಒಂದೇ ದಿನದಲ್ಲಿ ಶೇ.90ರಷ್ಟುಹಾಗೂ ಪಾಸಿಟಿವಿಟಿ ಶೇ.165ರಷ್ಟು ಏರಿದೆ.
ಸೋಂಕಿನ ಪರಿಣಾಮ ಅರ್ಥೈಸಿಕೊಳ್ಳಲು ನಿತ್ಯ ಕೋವಿಡ್ ವರದಿ ನೀಡುವುದು ಅಗತ್ಯ. ಇದರಿಂದ ಸೋಂಕಿನ ಮೇಲೆ ನಿಗಾ ಇರಿಸಿ ನಿರ್ವಹಣೆಗೆ ಕೇಂದ್ರ-ರಾಜ್ಯ-ತಾಲೂಕು ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಲು ನೆರವಾಗಲಿದೆ ಎಂದಿದ್ದಾರೆ.