ರಷ್ಯಾ, ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ತಳೆದಿರುವ ತಟಸ್ಥ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಯುದ್ಧದ ವಿಷಯದಲ್ಲಿ ಇಡೀ ವಿಶ್ವವೇ ಇಬ್ಭಾಗವಾಗಿದ್ದರೂ ಜಾಗತಿಕ ಒತ್ತಡಕ್ಕೆ ಮಣಿಯದೆ ತಟಸ್ಥ ಧೋರಣೆ ತಳೆಯುವ ಮೂಲಕ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.
ಇದು ಭಾರತ ಹಿಂದೆಂದಿಗಿಂತಲೂ ಹೆಚ್ಚು ಸದೃಢವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಮೋದೀಜಿ ಅವರು ಹೇಳಿದ್ದಾರೆ.
ಬಿಜೆಪಿ 42ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷದ ಸಂಸದರು, ಶಾಸಕರು, ಕಾರ್ಯಕರ್ತರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ವರ್ಷದ ಸಂಸ್ಥಾಪನಾ ದಿನ ಅತ್ಯಂತ ಮಹತ್ವಪೂರ್ಣವಾಗಿದೆ.
ಮೊದಲನೆಯದಾಗಿ ನಾವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿದ್ದೇವೆ. ಇದು ಭಾರತದ ಅಮೃತ ಕಾಲವಾಗಿದೆ. ಎರಡನೆಯದಾಗಿ ಜಾಗತಿಕ ಪರಿಸ್ಥಿತಿಯಲ್ಲಿ ವ್ಯಾಪಕ ಬದಲಾವಣೆ ಕಂಡುಬರುತ್ತಿದೆ.
ಇದು ಭಾರತಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಸ್ಥಳೀಯ ವಸ್ತುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಅಗತ್ಯವಿದೆ ಎಂದು ಮೋದೀಜಿ ಅವರು ಹೇಳಿದ್ದಾರೆ.