ಪ್ಯಾಟ್ ಕಮಿನ್ಸ್ ಹಾಗೂ ವೆಂಕಟೇಶ್ ಅಯ್ಯರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಬಲದಿಂದ ಮಿಂಚಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐ ಪಿಎಲ್ 15 ನೇ ಆವೃತ್ತಿಯ 14ನೇ ಹಣಾಹಣಿಯಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿಕೊಂಡಿತ್ತು. ಇದರೊಂದಿಗೆ ಶ್ರೇಯಸ್ ಅಯ್ಯರ್ ಬಳಗ ಇದುವರೆಗೆ ಆಡಿದ 4 ಪಂದ್ಯಗಳ ಪೈಕಿ 3ರಲ್ಲಿ ಜಯಗಳಿಸಿದಂತಾಗಿದೆ. ಅತ್ತ ರೋಹಿತ್ ಶರ್ಮಾ ಪಡೆ ಸತತ ಮೂರನೇ ಸೋಲಿಗೆ ಗುರಿಯಾಯಿತು.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ 5 ಬಾರಿಯ ಚಾಂಪಿಯನ್ ಮುಂಬಯಿ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಕೊಲ್ಕತ್ತಾ ತಂಡ 24 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಗೆ 162ರನ್ ಕಲೆ ಹಾಕಿ ವಿಜಯೋತ್ಸವವನ್ನು ಆಚರಿಸಿತು.
ಬೌಲಿಂಗ್ ವೇಳೆ ಎರಡು ವಿಕೆಟ್ ಉರುಳಿಸಿದ್ದ ಪ್ಯಾಟ್ ಕಮಿನ್ಸ್, ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. ಕೇವಲ 15 ಎಸೆತಗಳಲ್ಲಿ ಆರು ಮನಮೋಹಕ ಸಿಕ್ಸರ್, 4 ಫೋರ್ ಸಹಿತ ಅಜೇಯ 56ರನ್ ಸಿಡಿಸಿದ್ದಾರೆ. ಇವರಿಗೆ ಸಾಥ್ ನೀಡಿದ ವೆಂಕಟೇಶ್ ಅಯ್ಯರ್ ಸಹ ಅರ್ಧಶತಕದ ಕೊಡುಗೆ ನೀಡಿದರು.
ಪ್ರಥಮ ಜಯದ ನಿರೀಕ್ಷೆಯಲ್ಲಿ ಕ್ರಿಸಿ ಗಿಳಿದ ಮುಂಬಯಿ ತಂಡಕ್ಕೆ ಕೆಕೆಆರ್ ವೇಗಿ ಉಮೇಶ್ ಯಾದವ್ ಪ್ರಾರಂಭದಲ್ಲಿ ಹೊಡೆತ ನೀಡಿದರು. ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟು 12 ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮ ಮೂರನೇ ಓವರ್ ನ ಐದನೇ ಎಸೆತದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಆಗ ತಂಡದ ಮೊತ್ತ ಕೇವಲ ಆರು ರನ್.
ಎರಡನೇ ವಿಕೆಟ್ ಗೆ ಜೊತೆಗೂಡಿದ ಇಶಾನ್ ಕಿಶಾನ್ ಹಾಗೂ ಡೆ ವಾಲ್ಡ್ ಬ್ರೇವಿಸ್ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಲು ಶ್ರಮಿಸಿದರು. ಆದರೆ ಬ್ರೇವಿಸ್ ಅವರು ಸ್ಪಿನ್ನರ್ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸುವುದರೊಂದಿಗೆ 39 ರನ್ಗಳ ಜೊತೆಯಾಟ ಕೊನೆಗೊಂಡಿತ್ತು. ಕೇವಲ 10 ರನ್ ಗಳ ಅಂತರದಲ್ಲಿ ಇಶಾನ್ ಕಿಶಾನ್ ಕೂಡ ಔಟಾದರು.