ರಷ್ಯಾದ ಜೊತೆ ನಡೆಯುವ ಮಾತುಕತೆಯ ಭಾಗವಾಗಿ ಉಕ್ರೇನ್ ಒಂದು ತಟಸ್ಥ ನಿಲುವನ್ನು ತಳೆಯಲು ಸಿದ್ಧವಿದೆ. ಆದರೆ ಅಂಥದೊಂದು ಒಪ್ಪಂದವನ್ನು ಜನಮತ ಸಂಗ್ರಹಣೆಗೆ ಹಾಕಬೇಕೆಂದು ರವಿವಾರ ಬಿತ್ತರಗೊಂಡ ತಮ್ಮ ಹೇಳಿಕೆಯಲ್ಲಿ ಜೆಲೆನ್ಸ್ಕಿ ಹೇಳಿದ್ದಾರೆ.
ಸುಮಾರು ಎರಡು ವಾರಗಳ ಅವಧಿಯಲ್ಲಿ ಉಕ್ರೇನ್ ಮತ್ತು ರಷ್ಯಾ ಶಾಂತಿ ಮಾತುಕತೆ ನಡೆಸಲು ಮುಖಾಮುಖಿಯಗಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಹೇಳಿಕೆಯೊಂದನ್ನು ನೀಡಿರುವ ಅಮೆರಿಕಾದ ಅಧಿಕಾರಿಯೊಬ್ಬರು ಉಕ್ರೇನಲ್ಲಿ ಯುದ್ಧ ನಿಲ್ಲಿಸುವ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಲ್ಲ ಎಂದು ಹೇಳಿದ್ದಾರೆ.
ನಾನು ಇದುವರೆಗೆ ಮನಗಂಡಿರುವ ಅಂಶಗಳ ಆಧಾರದಲ್ಲಿ ಹೇಳುವುದಾದರೆ, ಈ ಹಂತದಲ್ಲಿ ರಾಜಿಮಡಿಕೊಳ್ಳಲು ಪುಟಿನ್ ತಯಾರಿಲ್ಲ ಎಂದು ಹೆಸರು ಹೇಳಿಕೊಳ್ಳಲಿಚ್ಛಿಸದ ಯುಎಸ್ ಗೃಹ ಇಲಾಖೆಯ ಅಧಿಕಾರಿಯೊಬ್ಬರು ರಾಯಿಟರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ವಾರದ ಅಂತ್ಯದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರು ಯುದ್ಧವನ್ನು ನಿಲ್ಲಿಸಲು ಸಾಧ್ಯವಾಗಬಹುದಾದ ಮಾರ್ಗ ರೂಪಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಉಕ್ರೇನ್ನ ಸಾರ್ವಭೌಮತ್ವವನ್ನು ಕಡಿಮೆ ಮಾಡುವ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಹಿನ್ನೆಲೆಯಲ್ಲಿ ಮುಖ್ಯವಾದ ಮಾತುಕತೆಗೆ ಅನುಕೂಲವಾಗುವಂಥ ಸರಳ ಮಾರ್ಗೋಪಾಯವನ್ನು ನಾವು ಪುಟಿನ್ ಗೆ ಸೂಚಿಸಿದಾಗ್ಯೂ ಯಾವುದೇ ಆಶಾಕಿರಣ ಮೂಡುವ ಲಕ್ಷಣಗಳು ಕಾಣುತ್ತಿಲ್ಲ, ಎಂದು ಯುಎಸ್ ಆಧಿಕಾರಿ ಹೇಳಿದ್ದಾರೆ.
ಟರ್ಕಿಯ ಅಧ್ಯಕ್ಷ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರು ಪುಟಿನ್ ಜೊತೆ ಭಾನುವಾರಂದು ಮಾತಕತೆ ನಡೆಸಿದ ಬಳಿಕ ಟರ್ಕಿಯ ರಾಜಧಾನಿ ಇಸ್ತಾನ್ಬುಲ್ ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆಗಾಗಿ ವೇದಿಕೆ ಸಿದ್ಧವಾಗಿದೆ. ಆದರೆ ಅಲ್ಲಿ ನಡೆಯುವ ಮಾತುಕತೆಯಿಂದ ಯಾವುದೇ ಮಹತ್ತರ ಬದಲಾವಣೆ ಆಗುವ ನಿರೀಕ್ಷೆ ಇಲ್ಲವೆಂದು ಉಕ್ರೇನ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾದ ಜೊತೆ ನಡೆಯುವ ಮಾತುಕತೆಯ ಭಾಗವಾಗಿ ಉಕ್ರೇನ್ ಒಂದು ತಟಸ್ಥ ನಿಲುವನ್ನು ತಳೆಯಲು ಸಿದ್ಧವಿದೆ ಆದರೆ ಅಂಥದೊಂದು ಒಪ್ಪಂದವನ್ನು ತೃತೀಯ ಪಕ್ಷಗಳು ದೃಢೀಕರಿಸಬೇಕು ಮತ್ತು ಜನಮತ ಸಂಗ್ರಹಣೆಗೆ ಹಾಕಬೇಕೆಂದು ಭಾನುವಾರ ಬಿತ್ತರಗೊಂಡ ತಮ್ಮ ಹೇಳಿಕೆಯಲ್ಲಿ ಜೆಲೆನ್ಸ್ಕಿ ಹೇಳಿದ್ದಾರೆ.
ಪುಟಿನ್ ಸೇನೆಗಳು ಫೆಬ್ರುವರಿ 24 ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಒಂದು ತಿಂಗಳು ಬಳಿಕ ಜೆಲೆನ್ಸ್ಕಿ ಅವರು ರವಿವಾರದಂದು ರಷ್ಯಾದ ಪತ್ರಕರ್ತರೊಂದಿಗೆ ಸುಮಾರು 90 ನಿಮಿಷಗಳ ಕಾಲ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತಾಡಿ, ರಷ್ಯಾ ಯುದ್ಧವಿರಾಮ ಘೋಷಿಸಿ ಮತ್ತು ಪಡೆಗಳನ್ನು ವಾಪಸ್ಸು ಕರೆಸಿಕೊಳ್ಳದ ಹೊರತು ಯಾವುದೇ ರೀತಿಯ ಶಾಂತಿ ಮಾತುಕತೆ ಮತ್ತು ಸಂಧಾನಕ್ಕೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ. ಆದರೆ, ಮಾಸ್ಕೋ ಅಧಿಕಾರಿಗಳು ಉಕ್ರೇನ್ ಅಧ್ಯಕ್ಷನ ಜೊತೆ ನಡೆಸಿದ ಸಂದರ್ಶನ ಬಿತ್ತರಿಸಬಾರದೆಂದು ರಷ್ಯಾದ ಮಾಧ್ಯಮಗಳಿಗೆ ಕಟ್ಟೆಚ್ಚರಿಕೆ ನೀಡಿದ್ದಾರೆ.
ರಷ್ಯಾ ಆಕ್ರಮಿಸಿಕೊಂಡಿರುವ ಪ್ರಾಂತ್ಯಗಳನ್ನು ಬಲಪ್ರಯೋಗಿಸಿ ವಾಪಸ್ಸು ಪಡೆದುಕೊಳ್ಳುವ ಇರಾದೆ ತಮಗಿಲ್ಲ ಎಂದು ಸ್ಪಷ್ಟಪಡಿಸಿರುವ ಜೆಲೆನ್ಸ್ಕಿ ಅವರು, ತಾವೇನಾದರೂ ಹಾಗೆ ಮಾಡಲು ಮುಂದಾದರೆ ಅದು ಮೂರನೇ ವಿಶ್ವಯುದ್ಧಕ್ಕೆ ನಾಂದಿಯಾಗುತ್ತದೆ ಎಂದು ಹೇಳಿದ್ದಾರಲ್ಲದೆ, ಡೊನ್ಬಾಸ್ ಪೂರ್ವ ಪ್ರಾಂತ್ಯದಲ್ಲಿ ಒಂದು ರಾಜಿ ಸಂಧಾನ ತಮಗೆ ಬೇಕಾಗಿದೆ ಎಂದಿದ್ದಾರೆ. ಈ ಪ್ರಾಂತ್ಯವು 2014ರಿಂದ ರಷ್ಯಾ ಬೆಂಬಲಿತ ಸೇನೆಯ ವಶದಲ್ಲಿದೆ. ತನ್ನ ನೆರೆ ರಾಷ್ಟ್ರವನ್ನು ಸೇನಾಬಲಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಉಕ್ರೇನ್ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಇದನ್ನು ಅಪ್ರಚೋದಿತ ಆಕ್ರಮಣಕ್ಕೆ ನೆಪ ಎಂದು ಬಣ್ಣಿಸುತ್ತಿವೆ.