Saturday, December 13, 2025
Saturday, December 13, 2025

ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಎನಿ ಎನರ್ಜಿ ಅಂತಾ ರಾಷ್ಟ್ರೀಯ ಪ್ರಶಸ್ತಿ

Date:

ನವೀಕರಿಸಬಹುದಾದ ಇಂಧನ ಮೂಲಗಳ ಸಂಶೋಧನಾ ಕ್ಷೇತ್ರದಲ್ಲಿ ನಡೆಸುವ ಮಹತ್ತ್ವದ ಸಂಶೋಧನೆಯನ್ನು ಪರಿಗಣಿಸಿ ಇಟಲಿ ದೇಶವು ಭಾರತ ರತ್ನ ಸಿ.ಎನ್.ಆರ್.ರಾವ್ ಅವರಿಗೆ ನೀಡಿರುವ ಪ್ರತಿಷ್ಠಿತ ಸ್ವರ್ಣ ಪದಕಸಹಿತ ಎನಿ ಎನರ್ಜಿ ಫ್ರಾಂಟಿಯರ್ ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಲ್ಲಿ ಪ್ರದಾನ ಮಾಡಿದರು.

ರಾವ್ ಅವರು ಈ ಪ್ರಶಸ್ತಿಗೆ ಪಾತ್ರರಾದ ಏಷ್ಯಾದ ಮೊಟ್ಟಮೊದಲ ವಿಜ್ಞಾನಿಯಾಗಿದ್ದಾರೆ.
1.87 ಕೋಟಿ ರೂ.ಗಳಿಗೂ ಹೆಚ್ಚು ನಗದುಳ್ಳ ಈ ಪ್ರಶಸ್ತಿಯನ್ನು 2021ರ ಸಾಲಿಗೆ ಅನ್ವಯವಾಗುವಂತೆ ಹೋದ ವರ್ಷವೇ ಇಟಲಿಯ ಮಿಲಾನ್ ನಗರದ `ಎನಿ ಎನ್ರಿಕೋ ಫೌಂಡೇಶನ್’ ಘೋಷಿಸಿತ್ತು.

ಆದರೆ, ಹೋದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಇಟಲಿಯ ಅಧ್ಯಕ್ಷೀಯ ಅರಮನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ, ಕೋವಿಡ್ ಹಿನ್ನೆಲೆಯಲ್ಲಿ ರಾವ್ ಅವರು ಖುದ್ದಾಗಿ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಪದಕ ಪುರಸ್ಕಾರವನ್ನು ಆ ಪ್ರತಿಷ್ಠಾನವು ಬೆಂಗಳೂರಿಗೆ ಕಳಿಸಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ವರ್ಣ ಪದಕವನ್ನು ಹಸ್ತಾಂತರಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ವಿಜ್ಞಾನ ಸಂಶೋಧನೆಗೆ ಜೀವನವನ್ನೇ ಮುಡಿಪಾಗಿಟ್ಟಿರುವ ರಾವ್ ಅವರು ಮನುಕುಲದ ದಿಕ್ಕುದೆಸೆಗಳನ್ನೇ ಬದಲಿಸುವಂತಹ ಆವಿಷ್ಕಾರಗಳನ್ನು ಮಾಡಿದ್ದಾರೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅವರು ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಮಾರ್ಗದರ್ಶನದಿಂದ ಕರ್ನಾಟಕವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ’ ಎಂದು ಬಣ್ಣಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನಗಳಿಲ್ಲದೆ ಆಧುನಿಕ ಬದುಕನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ರಾವ್ ಅವರು 60 ವರ್ಷಗಳಿಗೂ ಹೆಚ್ಚು ಕಾಲದ ತಮ್ಮ ಬದುಕನ್ನು ಸಂಶೋಧನೆಯಲ್ಲೇ ಕಳೆದಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ವಿಜ್ಞಾನಿಗಳಿಂದಾಗಿ ಮನುಷ್ಯನ ಬದುಕು ಔನ್ನತ್ಯಕ್ಕೇರಿದೆ’ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಎನ್.ಆರ್.ರಾವ್ ನೇತೃತ್ವದಲ್ಲಿ ರಾಜ್ಯ ಸರಕಾರವು ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ.

ಇತ್ತೀಚೆಗಷ್ಟೇ 12ನೇ ನ್ಯಾನೋ ಬೆಂಗಳೂರು ಸಮಾವೇಶವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯವು ನ್ಯಾನೋ ತಂತ್ರಜ್ಞಾನದ ರಾಜಧಾನಿಯಾಗಿ ಬೆಳೆಯಲಿದೆ’ ಎಂದರು.

21ನೇ ಶತಮಾನವು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವಾಗಿದೆ. ಜತೆಗೆ ಜಗತ್ತಿನಾದ್ಯಂತ ನವೀಕರಿಸಬಹುದಾದ ಮತ್ತು ಪರ್ಯಾಯ ಇಂಧನಮೂಲಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ, ದೈತ್ಯ ಹೆಜ್ಜೆಗಳನ್ನು ಇಟ್ಟಿರುವ ರಾವ್ ಅವರು ನಮ್ಮ ಕಣ್ಣ ಮುಂದಿನ ಜೀವಂತ ದಂತಕತೆಯಾಗಿದ್ದಾರೆ. ಅವರ ಒತ್ತಾಸೆಯಂತೆ, ರಾಜ್ಯದಲ್ಲೂ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಆದ್ಯತೆ ಕೊಡಲಾಗುತ್ತಿದ್ದು, ತಕ್ಕ ನೀತಿಗಳನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ.ಇಂದುಮತಿ ರಾವ್, ಜೆ.ಎನ್.ಸಿ.ಎ.ಎಸ್.ಆರ್.ನ ಮುಖ್ಯಸ್ಥ ಪ್ರೊ.ಜಿ.ಯು.ಕುಲಕರ್ಣಿ ಸೇರಿದಂತೆ ನೂರಾರು ವಿಜ್ಞಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

G. Parameshwara ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು ಕ್ರಮ: ಸಚಿವ ಜಿ.ಪರಮೇಶ್ವರ

G. Parameshwara ದರೋಡೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ...

Adichunchanagiri Mutt ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ ರಾಜ್ಯ ಮಟ್ಟದ ಉಚಿತ ಅರ್ಚಕ ತರಬೇತಿ ಶಿಬಿರ ಆಯೋಜನೆ

Adichunchanagiri Mutt ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಮಹಾ...