ಕಳೆದ ತಿಂಗಳು ಆತಂಕ ಮೂಡಿಸಿದ್ದ ಕೋವಿಡ್ ಮೂರನೇ ಅಲೆಯು ಅತ್ಯಂತ ವೇಗವಾಗಿ ಇಳಿಕೆಯಾಗುತ್ತಿದೆ. ಜನರು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ ಸಾವಿರದೊಳಗಿದೆ. ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿದೆ. ಪ್ರಸ್ತುತ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 7,518 ರಷ್ಟಿದೆ. ಈ ತಿಂಗಳ ಅಂತ್ಯಕ್ಕೆ 2 ಸಾವಿರದ ಸಮೀಪ ಬರುವ ನಿರೀಕ್ಷೆ ಇದೆ.
ಸಾವಿನ ಸಂಖ್ಯೆ ಕೂಡ ಸಿಂಗಲ್ ಡಿಜಿಟ್ ಗೆ ಇಳಿಯಲಿದೆ. ಮೂರನೇ ಅಲೆಯಲ್ಲಿ 9.35 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದರು. 1,500 ಜನರು ಸೋಂಕಿನಿಂದ ಮೃತಪಟ್ಟಿದ್ದರು.
ದೇಶದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣದಿಂದ ರಾತ್ರಿ ಕರ್ಫ್ಯೂ ಸೇರಿದಂತೆ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
“ಸಾಮಾಜಿಕ,ಧಾರ್ಮಿಕ, ಮನೋರಂಜನೆ ಕ್ರೀಡೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಗೊಳಿಸಬಹುದು. ಹಾಗಿಯೇ ರಾತ್ರಿ ಕರ್ಫ್ಯೂ ಅವಧಿಯನ್ನು ಕಡಿತ ಮಾಡಬಹುದು. ಸ್ಥಳೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಕೈಗೊಳ್ಳಬೇಕು” ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಲಹೆ ನೀಡುವ ಮೂಲಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿದ್ದಾರೆ.