ನಮ್ಮ ಮರಣದ ನಂತರ ಮಣ್ಣಲ್ಲಿ ಮಣ್ಣಾಗಿ ಅಥವಾ ಸುಟ್ಟು ಬೂದಿಯಾಗುವ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಜೀವನದಲ್ಲಿ ಬೆಳಕು ಮೂಡಿಸಬಹುದು ಎಂದು ಫ್ರೆಂಡ್ ಸೆಂಟರ್ ನೇತ್ರ ಹಾಗೂ ರಕ್ತ ಭಂಡಾರದ ಅಧ್ಯಕ್ಷ ವಿ. ನಾಗರಾಜ್ ಹೇಳಿದರು.
ನಗರದ ವಿನಾಯಕನಗರದಲ್ಲಿರುವ ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಕನ್ಯಕಾ ಮಹಿಳಾ ಸಂಘ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ಸಮಾಜದಲ್ಲಿ ಅನೇಕರು ವಿವಿಧ ಕಾರಣಗಳಿಂದ ದೃಷ್ಟಿಹೀನರಾಗಿದ್ದು, ಹಲವರಿಗೆ ಕಾರ್ನಿಯಾ ಅಗತ್ಯವಿದೆ. ನಮ್ಮ ಮರಣದ ನಂತರ ನೇತ್ರದಾನ ಮಾಡುವ ಮೂಲಕ ಪವಿತ್ರ ದಾನಿಗಳಾಗಿ ಇನ್ನೊಬ್ಬರ ಬಾಳಿಗೆ ಬೆಳಕಾಗೋಣ ಎಂದು ಅವರು ಕರೆ ನೀಡಿದರು.
ಫ್ರೆಂಡ್ ಸೆಂಟರ್ ನೇತ್ರ ಹಾಗೂ ರಕ್ತ ಭಂಡಾರದ ಕಾರ್ಯದರ್ಶಿ ಜಿ. ವಿಜಯಕುಮಾರ್ ಮಾತನಾಡಿ, ನೇತ್ರದಾನಕ್ಕೆ ಯಾವುದೇ ಜಾತಿ, ಮತ, ಲಿಂಗ ಅಥವಾ ವಯಸ್ಸಿನ ಮಿತಿಯಿಲ್ಲ. 18 ವರ್ಷ ಮೇಲ್ಪಟ್ಟವರು ನೇತ್ರದಾನದ ಪ್ರತಿಜ್ಞೆ ಮಾಡಬಹುದು. ನೇತ್ರದಾನಿಗಳ ಹೆಸರು ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಮೂಢನಂಬಿಕೆಗಳನ್ನು ತೊರೆದು ಎಲ್ಲರೂ ನೇತ್ರದಾನಕ್ಕೆ ಮುಂದಾಗಬೇಕು. ಈ ಕುರಿತು ಕುಟುಂಬದ ಸದಸ್ಯರಿಗೂ ಮಾಹಿತಿ ನೀಡುವುದು ಅಗತ್ಯ ಎಂದು ಹೇಳಿದರು.
ಫ್ರೆಂಡ್ ಸೆಂಟರ್ ಅಧ್ಯಕ್ಷ ಮಲ್ಲಿಕಾರ್ಜುನ್ ಖಾನೂರ್ ಮಾತನಾಡಿ, ಸಂಸ್ಥೆಯು ಕಳೆದ 60 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ನಗರದ ವಿವಿಧ ಸಂಘ-ಸಂಸ್ಥೆಗಳಲ್ಲಿ ನೇತ್ರದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ ಎಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಕನ್ಯಕಾ ಮಹಿಳಾ ಸಂಘದ ಅಧ್ಯಕ್ಷೆ ಶಾರದಾ ಗೋಪಾಲ್ ವಹಿಸಿದ್ದರು. ವೇದಿಕೆಯಲ್ಲಿ ಸುವರ್ಣ ವಿಜಯಕುಮಾರ್, ಸುನಿತಾ ಮೋಹನ್, ಬಂಗಾರಲಕ್ಷ್ಮಿ, ಸುಮ ಮೂರ್ತಿ, ಉಷಾ ಶಶಿಧರ್, ಆರ್. ಮನೋಹರ್, ಸಹ ಕಾರ್ಯದರ್ಶಿ ಶ್ರೀಮತಿ ಕೃಷ್ಣವೇಣಿ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
