ವರದಾಮೂಲವೂ ಒಂದು ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದೆ. ಇಲ್ಲಿ ಹುಟ್ಟಿ ಹರಿಯುತ್ತಿರುವ ನದಿ ಲಕ್ಷಾಂತರ ಜನರ ನೀರಿನ ದಾಹ ಹಾಗೂ ಕೃಷಿಕರ ಬವಣೆಯನ್ನು ನೀಗುತ್ತಿದೆ. ಇದು ಹರಿಯುವ ಕಡೆಯಲ್ಲ ಅರಣ್ಯ, ಕೆರೆ, ಕಾಲುವೆಗಳು ತುಂಬಿ ಜನರ ಜೀವನೋಪಾಯಕ್ಕೆ ಹೇತುವಾಗಿದೆ. ನದಿಯ ಇಕ್ಕೆಲಗಳೂ ಜೀವವೈವಿದ್ಯದ ತಾಣವಾಗಿದ್ದು ಅಪರೂಪದ ಜೀವಿಗಳನ್ನು ಕಾಣುತ್ತೇವೆ. ವೈವಿದ್ಯಮಯವಾದ ಭತ್ತದ ತಳಿಗಳು, ಸಾಂಬಾರು ಗಿಡಗಳು, ಅಡಿಕೆ, ತೆಂಗು, ಏಲಕ್ಕಿ ಎಲ್ಲ ಬೆಳೆಯನ್ನು ಬೆಳೆಯಬಹುದಾದ ಹದವಾದ ವಾತಾವರಣ ಹಾಗೂ ಮಣ್ಣನ್ನು ಹೊಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಈ ನದಿಯ ಹರಿವು ಹಾಗೂ ಪಾತ್ರ ಇಕ್ಕದಾಗುತ್ತಿರುವುದರಿಂದ ಇಲ್ಲಿನ ಜೀವರಾಶಿಗಳು ಸಸ್ಯ ಪ್ರಬೇಧಗಳು ಅಳಿವಿನಂಚಿಗೆ ಸಾಗುತ್ತಿವೆ ಎಂಬುದು ದುರಾದೃಷ್ಟ. ಭೂಮಿಯ ಮೇಲಿನ ಸಸ್ಯ, ನದಿ, ಕೆರೆಗಳ ಜೊತೆ ಜೊತೆಗೆ ನಾವು ಬದುಕಿದಲ್ಲಿ ಮಾತ್ರ ನಮ್ಮ ಜೀವನ ಹಸನಾಗುತ್ತದೆ. ಇವುಗಳಿಗೂ ಜೀವವಿದೆ ಎಂಬುದನ್ನು ಅರಿತು ಅವುಗಳ ಸಂರಕ್ಷಣೆ ಹಿಂದಿಗಿಂತ ಇಂದು ಅತ್ಯಂತ ತುರ್ತಾಗಿದೆ. ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಕೆಲವು ನದಿಗಳು ನೀರೇ ಇಲ್ಲದೆ, ನೀರಿದ್ದೂ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿ ಕಾಣೆಯಾಗಿವೆ. ಇವುಗಳ ಸಂರಕ್ಷಣೆ ಯಾರೊಬ್ಬರಿಂದ ಸಾಧ್ಯವಿಲ್ಲದ ಮಾತು. ಇಡೀ ವ್ಯವಸ್ಥೆ ಈ ದಿಶೆಯಲ್ಲಿ ಎಚ್ಚೆತ್ತುಕೊಂಡು ಪರಿಸರವನ್ನು ಕಾಪಾಡಿಕೊಂಡು ಬರಬೇಕಾಗಿದೆ ಎಂದು ರಂಗಕರ್ಮಿ, ನೀನಾಸಮ್ ನಿರ್ದೇಶಕರಾದ ಕೆ.ವಿ. ಅಕ್ಷರ ಕರೆ ನೀಡಿದರು. ಕುವೆಂಪು ವಿಶ್ವವಿದ್ಯಾಲಯ ಈ ಸಾಲಿನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ಅಂಗವಾಗಿ ಶ್ರೀ ವರದಾಂಬಾ ಸೇವಾ ಪ್ರತಿಷ್ಠಾನ, ಶ್ರೀ ಕ್ಷೇತ್ರ ವರದಾಮೂಲ ಅವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕದ ಜೀವವೈವಿದ್ಯಮಂಡಳಿಯು ಕೊಡಮಾಡುವ ಈ ಬಾರಿಯ ರಾಜ್ಯ ಜೀವವೈವಿದ್ಯ ಪ್ರಶಸ್ತಿಪುರಸ್ಕೃತ “ವರದಾ ನದಿ ಸಾಕ್ಷ್ಯ ಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕರಾದ ಶ್ರೀಮತಿ ಶ್ರಾವ್ಯಾ ಸಾಗರ್ ಅವರನ್ನೂ ಸಹ ಸನ್ಮಾನಿಸಲಾಯಿತು.
ಗೌರವ ಪುರಸ್ಕೃತರಿಬ್ಬರೂ ನಮ್ಮ ಊರಿನ ಹೆಮ್ಮೆಯಾಗಿದ್ದಾರೆ. ಪುಟ್ಟ ಪುಟ್ಟ ಹಳ್ಳಿಗಳಲ್ಲಿದ್ದುಕೊಂಡೇ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಹೆಸರು ಮಾಡುತ್ತಿರುವ ಇವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಇವರುಗಳ ಸಾಧನೆ ಸಾಕಷ್ಟು ಯುವಜನರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮೆಲ್ಲರ ಆಶಯ ಎಂದು ಜೀವವೈವಿದ್ಯ ಮಂಡಳಿಯ ನಿಕಟಪೂರ್ವ ಸದಸ್ಯ ಕವಲಕೋಡು ವೆಂಕಟೇಶ್ ಅವರು ಸನ್ಮಾನಿತರನ್ನು ಪರಿಚಯಿಸುತ್ತಾ ತಿಳಿಸಿದರು.
ಕಾರ್ಯಕ್ರಮದ ಮೊದಲು ಕುಮಾರಿ ಧಾತ್ರಿ ಅರಣಕುಮಾರ್ ಪ್ರಾರ್ಥಿಸಿದರು, ವರದಾಂಬಾ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಟಿ.ಎಸ್. ಗಣಪತಿ ಎಲ್ಲರನ್ನು ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವರದಾಂಬಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಮೇಲಿನಮನೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಹಾಗೂ ವರದಾಂಬಾ ವ್ಯವಸ್ಥಾಪನಾ ಸಮಿತಿಗಳ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್, ಪ್ರಗತಿಪರ ಕೃಷಿಕ ನಾಗೇಂದ್ರ ಸಾಗರ್, ಸಾಗರ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ಜಿ. ಶ್ರೀಧರ್, ಗ್ರಾಮಪಂಚಾಯ್ತಿ ಭೀಮನಕೋಣೆ ನಿಕಟಪೂರ್ವ ಅಧ್ಯಕ್ಷ ವಿ.ಕೆ. ಮಂಜುನಾಥ ಶೆಟ್ಟಿ ಭಾಗವಹಿಸಿದ್ದರು. ಸೇವಾ ಪ್ರತಿಷ್ಠಾನದ ಸದಸ್ಯರಾದ ಅಶೋಕ ಶಡ್ತಿಕೆರೆ, ಅರುಣ್ಕುಮಾರ್ ಮೇಲಿನ ಕವಲಕೋಡು, ಸತೀಶ ಎಲ್.ವಿ., ನಾಗರಾಜ ವಿ.ಟಿ., ಅಲ್ಲದೆ ಊರಿನ ಗಣ್ಯರು ನಾಗರೀಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮದ ನಂತರ ಮಲೆನಾಡು ಗಮಕ ಕಲಾ ಟ್ರಸ್ಟ್ (ರಿ.) ಸಾಗರ ಇವರಿಂದ “ವಿಶ್ವರೂಪ ದರ್ಶನ” (ಕುಮಾರ ವ್ಯಾಸ ಭಾರತದ ಆಯ್ದ ಭಾಗವನ್ನು) ಗಮಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ವಿ. ಅಶೋಕ್ಕುಮಾರ್ ಹೆಗ್ಗೋಡು ಅವರ ಕಾವ್ಯ ವಾಚನವನ್ನು ಕಟ್ಟಿನಕೆರೆ ಕೆ.ಎಂ. ರವೀಂದ್ರ ಅವರು ವ್ಯಾಖ್ಯಾನಿಸಿದರು.
ಸಾಧಕರಾದ ಡಾ.ಕೆ.ವಿ.ಅಕ್ಷರ ಮತ್ತು ಶ್ರಾವ್ಯಾ ಸಾಗರ್ ಅವರಿಗೆ ಹಾರ್ದಿಕ ಸನ್ಮಾನ
Date:
