Green Impact Summit ಕಳೆದ ಹತ್ತು ವರ್ಷಗಳಿಂದ ಪರಿಸರ ಸಂರಕ್ಷಣೆ, ಸಾಮಾಜಿಕ ಅರಣ್ಯ, ಹವಾಮಾನ ಬದಲಾವಣೆ ಜಾಗೃತಿ, ಯುವಜನರ ಸಬಲೀಕರಣ ಹಾಗೂ ಸುಸ್ಥಿರ ಅಭಿವೃದ್ಧಿಯ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೋ ಗ್ರೀನ್ ಅಸೋಸಿಯೇಷನ್ ತನ್ನ 10ನೇ ವರ್ಷದ ಸಂಭ್ರಮದ ಅಂಗವಾಗಿ ಗ್ರೀನ್ ಇಂಪ್ಯಾಕ್ಟ್ ಸಮ್ಮಿಟ್- 2026 ಹಾಗೂ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರೀನ್ ಶಾರ್ಕ್ ಟ್ಯಾಂಕ್ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಗ್ರೀನ್ ಶಾರ್ಕ್ ಟ್ಯಾಂಕ್ನಲ್ಲಿ ವಿವಿಧ ಕ್ಷೇತ್ರಗಳ ಪರಿಸರ ಸ್ನೇಹಿ ಹಾಗೂ ಸಾಮಾಜಿಕ ಪರಿಣಾಮ ಉಂಟುಮಾಡುವ ನವೋದ್ಯಮ ಕಲ್ಪನೆಗಳಿಗೆ ವೇದಿಕೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿಗಳು, ತಂತ್ರಜ್ಞರು ಮತ್ತು ಹೂಡಿಕೆದಾರರಾದ ರಾಜೇಶ್ ಕುಂದರ್, ವಿಕಾಸ್ ಪತ್ತಾರ್, ಅರುಣ್ ಬಾಲಮಟ್ಟಿ, ನಿವೇದನ್ ನೆಂಪೆ, ಸುಬ್ರಹ್ಮಣ್ಯ ಬಸವನಹಳ್ಳಿ ಅವರು ಗ್ರೀನ್ ಶಾರ್ಕ್ ಟ್ಯಾಂಕ್ನ ಹೂಡಿಕೆದಾರರು (ಶಾರ್ಕ್ಸ್)ಗಳಾಗಿ ಭಾಗವಹಿಸಿ ಸ್ಪರ್ಧಿಗಳ ಪರಿಕಲ್ಪನೆಗಳನ್ನು ಮೌಲ್ಯಮಾಪನ ಮಾಡಿದರು.
ಒಟ್ಟು 19 ತಂಡಗಳು ತಮ್ಮ ನವೀನ ಹಾಗೂ ಪರಿಸರ ಕಾಳಜಿಯ ಉದ್ಯಮ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸಿದವು. ಇವುಗಳÀ ಮೌಲ್ಯಮಾಪನದ ನಂತರ 3 ತಂಡಗಳನ್ನು ಇನ್ಕ್ಯುಬೇಷನ್ ಮತ್ತು ಮುಂದಿನ ಮಾರ್ಗದರ್ಶನಕ್ಕಾಗಿ ಆಯ್ಕೆ ಮಾಡಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಶಶಾಂಕ್ ಹೆಚ್. ಎಸ್., ವಿಸ್ತರಣಾ ನಿರ್ದೇಶಕರಾದ ಡಾ. ರಾಘವೇಂದ್ರ ಮೇಸ್ತ ಆಗಮಿಸಿದ್ದರು.
ವೇದಿಕೆಯಲ್ಲಿ ಗ್ರೋ ಗ್ರೀನ್ ಅಸೋಸಿಯೇಷನ್ ಅಧ್ಯಕ್ಷೆ ನಿರಂಜನಿ ರವೀಂದ್ರ, ಉಪಾಧ್ಯಕ್ಷೆ ಸವಿತಾ ಕುಮಾರ್, ಖಜಾಂಚಿ ಸೋನಾ ಶುಭಾ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ವೇತಾ ಆಚಾರ್ಯ, ನೈನಾ ರಾಜೇಶ್, ಉಜ್ವಲ ರವಿ, ಸುಪ್ರಿಯಾ ಚೇತನ್, ವಿಜಯಲಕ್ಷಿö್ಮ ಕಾರ್ತಿಕ್ ಮತ್ತಿತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ನಿರಂಜನಿ ರವೀಂದ್ರ, ಹತ್ತು ವರ್ಷಗಳು ಎನ್ನುವುದು ಕೇವಲ ಹಿಂದಿರುಗಿ ನೋಡುವ ಸಮಯವಲ್ಲ; ಭವಿಷ್ಯದತ್ತ ಹೊಸ ಕನಸುಗಳನ್ನು ಕಟ್ಟುವ ಸಮಯ. ನಾವು ನೆಟ್ಟ ಒಂದು ಚಿಕ್ಕ ಬೀಜ ಇಂದು ಸಾವಿರಾರು ಜನರನ್ನು ತಲುಪಿದ ಚಳವಳಿಯಾಗಿ ಬೆಳೆದಿದೆ. ಗ್ರೀನ್ ಶಾರ್ಕ್ ಟ್ಯಾಂಕ್ ಮೂಲಕ ಪರಿಸರ ಹಾಗೂ ಸಮಾಜಕ್ಕೆ ಉಪಯೋಗವಾಗುವ ಯುವಕರ ಆಲೋಚನೆಗಳಿಗೆ ಹೂಡಿಕೆ, ಮಾರ್ಗದರ್ಶನ ಮತ್ತು ಅವಕಾಶ ಒದಗಿಸುವ ವೇದಿಕೆಯನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು.
Green Impact Summit ಮರಗಳನ್ನು ನೆಡುವುದು ಮಾತ್ರ ಪರಿಸರ ಸಂರಕ್ಷಣೆ ಅಲ್ಲ; ಹೊಸ ಆಲೋಚನೆಗಳನ್ನು ಬೆಳೆಸುವುದೂ ಪರಿಸರ ಸಂರಕ್ಷಣೆಯಾಗಿದೆ. ಇಂದಿನ ಯುವಕರಲ್ಲಿ ಇರುವ ಸೃಜನಶೀಲತೆ ಮತ್ತು ಸಾಮಾಜಿಕ ಕಾಳಜಿ ನಮ್ಮ ನಾಳೆಯ ಹಸಿರು ಭವಿಷ್ಯದ ಆಶಾಕಿರಣವಾಗಿದೆ ಎಂದು ಹೇಳಿದರು.
ಗ್ರೋ ಗ್ರೀನ್ ಅಸೋಸಿಯೇಷನ್ ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಸಸಿಗಳ ನೆಡುವಿಕೆ, ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ, ಜೈವಿಕ ತ್ಯಾಜ್ಯ ನಿರ್ವಹಣೆ, ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಕೌಶಲ್ಯ ತರಬೇತಿ, ಉದ್ಯಾನ ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಕುರಿತ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದರು.
10 ವರ್ಷಗಳ ಸಾಧನೆಯಿಂದ ಪ್ರೇರಿತರಾಗಿ, ಮುಂದಿನ ದಶಕದಲ್ಲಿ ಇನ್ನಷ್ಟು ಹಸಿರು, ಸುಸ್ಥಿರ ಹಾಗೂ ನವೋದ್ಯಮ ಆಧಾರಿತ ಸಮಾಜ ನಿರ್ಮಾಣದತ್ತ ಗ್ರೋ ಗ್ರೀನ್ ಅಸೋಸಿಯೇಷನ್ ತನ್ನ ಪಯಣವನ್ನು ಮುಂದುವರಿಸಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
