Department of Health and Family Welfare ಮಕ್ಕಳಲ್ಲಿ ಸೀಸದ(ಲೆಡ್)ಅಂಶ ಹೆಚ್ಚಾಗುವುದು ಅವರ ಮೆದುಳಿನ ವಿಕಾಸದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುವುದರಿಂದ ಇದನ್ನು ಸೀಸದ ವಿಷ ಬಾಧೆ ಎಂದು ಕರೆಯಲಾಗುತ್ತದೆ. ಇದನ್ನು ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ‘ಭಾರತದ ಲೆಡ್ ಮ್ಯಾನ್’ ಎಂದೇ ಪ್ರಸಿದ್ಧರಾಗಿರುವ ಖ್ಯಾತ ಪರಿಸರ ವಿಜ್ಞಾನಿ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ತುಪ್ಪಿಲ್ ವೆಂಕಟೇಶ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲೆ, ಸುಬ್ಬಯ್ಯ ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಸೀಸದ ಮಾಲಿನ್ಯ, ಮಕ್ಕಳಲ್ಲಿ ಸೀಸದ ವಿಷಬಾಧೆಯ ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೆದುಳು ಬೆಳವಣಿಗೆಯ ಹಂತದಲ್ಲಿರುವುದರಿAದ ಸೀಸದ ಅಂಶವು ಅವರ ನರಮಂಡಲದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಸೀಸದ ಪ್ರಮಾಣ ಹೆಚ್ಚಾದಂತೆ ಮಗುವಿನ ಬುದ್ದಮತ್ತೆ(ಐಕ್ಯೂ) ಮಟ್ಟ ಕುಸಿಯುತ್ತದೆ. ಕಲಿತದ್ದು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ವರ್ತನೆಯಲ್ಲಿ ಬದಲಾವಣೆಯನ್ನು ಸಹ ಕಾಣಬಹುದಾಗಿದ್ದು ಈ ಬಗ್ಗೆ ಶಿಕ್ಷಕರು, ಪೋಷಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.
ಬಣ್ಣಗಳು, ಆಟಿಕೆಗಳು, ಆಹಾರ, ತರಕಾರಿ, ಕಲುಷಿತ ನೀರು, ಪೆನ್ಸಿಲ್, ನ್ಯೂಸ್ ಪೇಪರ್ ಪೊಟ್ಟಣಗಳು, ಹೇರ್ ಡೈ ಹೀಗೆ ವಿವಿಧ ಪದಾರ್ಥಗಳಲ್ಲಿ ಸೀಸವನ್ನು ಕಾಣಬಹುದಾಗಿದ್ದು ಇವುಗಳ ಬಳಕೆ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತ್ಯಗತ್ಯ. ಸ್ವಚ್ಚತೆ ಕಾಪಾಡುವುದು, ಪೌಷ್ಟಿಕ ಆಹಾರ ಸೇವನೆ ಸೇರಿದಂತೆ ಸೀಸ ಅಂಶ ಇರುವ ವಸ್ತುಗಳಿಂದ ದೂರ ಇರಬೇಕು. ಹಾಗೂ ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ರಕ್ತದಲ್ಲಿನ ಸೀಸದ ಪ್ರಮಾಣ ಪರೀಕ್ಷೆ ಮಾಡಿಸಬೇಕು.
ಈ ರಕ್ತ ಪರೀಕ್ಷೆಗೆ ಸುಮಾರು 1200 ಖರ್ಚು ಮಾಡಬೇಕಾಗುತ್ತದೆ. ಆದರೆ ಇಂದು ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ರಕ್ತದ ಪರೀಕ್ಷೆ ಮೂಲಕ ಸೀಸದ ಅಂಶವನ್ನು ಪರೀಕ್ಷಿಸಲಾಗುತ್ತಿದೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರು ಸೇರಿದಂತೆ ಎಲ್ಲರೂ ಸಹಕರಿಸಬೇಕು. ಇದನ್ನು ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು ಈವರೆಗೆ ಸುಮಾರು 50 ರಿಂದ 60 ಸಾವಿರ ಶಿಕ್ಷಕರಿಗೆ ಸೀಸದ ಬಗ್ಗೆ ಶಿಕ್ಷಣ ನೀಡಿ ಅರಿವು ಮೂಡಿಸಲಾಗಿದೆ. ಶಿಕ್ಷಕರು ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸಿಟಿ ಸ್ಮಾರ್ಟ್ ಆದರೆ ಸಾಲದು, ಜೊತೆಗೆ ಎಲ್ಲರೂ ಸ್ಮಾರ್ಟ್ ಪೀಪಲ್ ಮತ್ತು ಸ್ಮಾರ್ಟ್ ಚಿಲ್ಡçನ್ ಆಗಬೇಕೆಂದು ಕರೆ ನೀಡಿದ ಅವರು ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ ಎಂದರು.
Department of Health and Family Welfare ಡಾ.ಶಶಿಧರ್ ಮಾತನಾಡಿ, ಸೀಸವು ಮಕ್ಕಳ ಬುದ್ದಿಶಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಾವು ಒಮ್ಮೆ ಲಕ್ನೋ ಮೆಡಿಕಲ್ ಕಾಲೇಜಿಗೆ ಹೋದಾಗ, ಒಂದು ಮುದ್ದಾದ ಚಿಕ್ಕ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ಮಗು ತುಂಬಾ ಚೆನ್ನಾಗಿದ್ದರೂ ಮಂದವಾಗಿತ್ತು. ಆ ಮಗುವಿನ ರಕ್ತದಲ್ಲಿ ಸೀಸದ ಪ್ರಮಾಣ ಹೆಚ್ಚಾಗಿದ್ದು ಮಗುವಿನ ಮೆದುಳಿನ ವಿಕಾಸ ಕುಂಠಿತವಾಗಿತ್ತು. ಸೀಸದ ಕುರಿತು ಎಲ್ಲರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದ್ದು ಸ್ವಚ್ಚತೆ, ಪೌಷ್ಟಿಕತೆ ಕಡೆ ಗಮನ ಕೊಡಬೇಕು. ನ್ಯೂಸ್ ಪೇಪರ್ಲ್ಲಿ ಆಹಾರ ಪೊಟ್ಟಣ ಕಟ್ಟಬಾರದು ಎಂದು ತಿಳಿಸಿದರು.
ದಲ್ಲಾಸ್ನ ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯ ಮಾತನಾಡಿ, ಸೀಸವು ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುವುದರಿಂದ ಮಗುವಿನ ಜ್ಞಾಪಕ ಶಕ್ತಿ, ಗಮನ, ಐಕ್ಯೂ ಮೇಲೆ ಪರಿಣಾಮ ಬೀರಿ ಕಲಿಕಾ ನ್ಯೂನ್ಯತೆ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಈ ಬಗ್ಗೆ ಮುಖ್ಯವಾಗಿ ಪೋಷಕರು, ಶಿಕ್ಷಕರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಸೀಸ ದೇಹ ಪ್ರವೇಶಿಸುವದನ್ನು ತಡೆಯಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇದೊಂದು ಬಹು ಪ್ರಮುಖವಾದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ದುರ್ಗಿಗುಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಅಧ್ಯಕ್ಷತೆ ವಹಿಸಿದ್ದರು. ಡಿಎಸ್ಓ ಡಾ.ನಾಗರಾಜ್ ನಾಯ್ಕ್, ಕೆಎಫ್ಡಿ ನೋಡಲ್ ಅಧಿಕಾರಿ ಡಾ.ಹರ್ಷವರ್ಧನ್, ಸುಬ್ಬ್ಬಯ್ಯ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಬಾಲು, ರೋಟರಿ ಸಂಸ್ಥೆಯ ಕಾರ್ಯದರ್ಶಿ ಧನಂಜಯ ರಾಂಪುರ್, ವಿಜಯಕುಮಾರ್, ಮಹೇಶ್ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು. ಎನ್ವಿಬಿಡಿಸಿಪಿ ಅಧಿಕಾರಿ ಡಾ.ಗುಡದಪ್ಪ ಕಸಬಿ ಕಾರ್ಯಕ್ರಮ ನಿರ್ವಹಿಸಿದರು.
ಸೀಸದಿಂದ ಮಕ್ಕಳ ಮೆದುಳಿಗೆ ಹಾನಿ, ಸೀಸದ ವಿಷಬಾಧೆ ತಡೆಯಲು ಎಲ್ಲರೂ ಸಹಕರಿಸಬೇಕು : ಡಾ.ತುಪ್ಪಿಲ್ ವೆಂಕಟೇಶ್
Date:
