ನಗುವುದು ಮತ್ತು ನಗಿಸುವುದು ಒಂದು ಪರಮ ಕಲೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹಾಸ್ಯದ ಮೂಲಕ ವಿಶಿಷ್ಟ ಸ್ಥಾನ ಪಡೆದ ಮಹಾನ್ ಸಾಹಿತಿ ರಾಯಸಂ ಭೀಮಸೇನ ರಾವ್ (ಬೀಚಿ) ಅವರ ಸಾಹಿತ್ಯ ಮತ್ತು ಜೀವನ ಮೌಲ್ಯಗಳನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮವನ್ನು ಕರ್ನಾಟಕ ಸಂಘ ಆಯೋಜಿಸಿದೆ.
ಜೂನ್ 20ರಂದು ಶನಿವಾರ ಸಂಜೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡದ ಅಪ್ರತಿಮ ಹಾಸ್ಯ ಸಾಹಿತಿ ಬೀಚಿಯವರ ಸಾಹಿತ್ಯದ ವೈಶಿಷ್ಟ್ಯ, ಜೀವನ ಪ್ರೀತಿ ಹಾಗೂ ಅವರ ಹಾಸ್ಯ ಬರಹಗಳ ಸಾಮಾಜಿಕ ಮಹತ್ವವನ್ನು ಚರ್ಚಿಸಲಾಗುತ್ತದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಾಡಿನ ಖ್ಯಾತ ಹಾಸ್ಯ ಸಾಹಿತಿ ಹಾಗೂ ಆಕರ್ಷಕ ವಾಗ್ಮಿ ವೈ. ವಿ. ಗುಂಡುರಾವ್ ಭಾಗವಹಿಸಲಿದ್ದು, “ಬೀಚಿ ಸಾಹಿತ್ಯದಲ್ಲಿ ಜೀವನ ಪ್ರೀತಿ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇಂದಿನ ಕಾಲಘಟ್ಟದಲ್ಲಿ ಹಾಸ್ಯ ಎಂದರೆ ಅನುಕರಣೆ, ಅಶ್ಲೀಲತೆ ಅಥವಾ ತೇಜೋವಧೆ ಎಂಬ ಭಾವನೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಬೀಚಿಯವರ ಸಾಹಿತ್ಯ ನೀಡುವ ನಿಜವಾದ ಹಾಸ್ಯರಸ, ತಿಳಿನಗು ಮತ್ತು ಜೀವನೋತ್ಸಾಹವನ್ನು ನೆನಪಿಸಿಕೊಳ್ಳುವ ಅಪೂರ್ವ ಅವಕಾಶ ಇದಾಗಿದೆ.
ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹಾಸ್ಯರಸ ಋಷಿಗೆ ಗೌರವ ನಮನ ಸಲ್ಲಿಸುವಂತೆ ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಮನವಿ ಮಾಡಿದ್ದಾರೆ.
