ನಮ್ಮ ಸನಾತನರ ಅಧ್ಯಾತ್ಮಿಕ ಚಿಂತನಾ ಮೌಲ್ಯಗಳ ಅರಿವು ಇಂದಿನ ಹೊಸ ಪೀಳಿಗೆಗೂ ಅವಶ್ಯವಾಗಿದೆ ಎಂದು ಹಿರಿಯ ಪತ್ರಕರ್ತ, ಚಿಂತಕ ಡಾ. ಎಚ್ ಬಿ ಮಂಜುನಾಥ ಹೇಳಿದರು.
ಅವರು ನಿಟುವಳ್ಳಿಯ ಶ್ರೀ ಶಿವ ಚಿದಂಬರ ಸೇವಾ ಸಂಘ ಭಕ್ತ ಮಂಡಳಿ ವತಿಯಿಂದ ಏರ್ಪಾಡಾಗಿದ್ದ ಸಹಸ್ರ ಮೋದಕ ಶ್ರೀ ಮಹಾಗಣಪತಿ ಹೋಮದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಉಪನ್ಯಾಸ ನೀಡುತ್ತಾ ಸಾರ್ವಕಾಲಿಕವಾದ ಸರ್ವೋತ್ತಮವಾದ ಜೀವನ ಮೌಲ್ಯಗಳು ನಮ್ಮ ಪುರಾಣ ಮಹಾಕಾವ್ಯಾದಿಗಳಲ್ಲಿ ಕಥಾ ರೂಪವಾಗಿ ಸ್ವಾರಸ್ಯಕರವಾಗಿ ಹೇಳಲಾಗಿದೆ, ಕೇವಲ ಕಥಾ ಭಾಗವನ್ನಷ್ಟೇ ಓದಿ, ಕೇಳಿ, ನೋಡಿದರೆ ಸಾಲದು, ಅದರ ಹಿಂದಿರುವ ವಿಚಾರ ಮತ್ತು ಮೌಲ್ಯಗಳನ್ನು ಅರಿತುಕೊಂಡು ಮನೆಯಲ್ಲಿ ಪೋಷಕರು ಮಕ್ಕಳಿಗೆ ಸ್ವಾರಸ್ಯಕರವಾಗಿ ಹೇಳಬೇಕು ಎಂದ ಎಚ್ . ಬಿ. ಮಂಜುನಾಥ್ ಸನಾತನ ಎಂದರೆ ಅತ್ಯಂತ ಪ್ರಾಚೀನವಾದದ್ದು ಮತ್ತು ನಾಶವಾಗದೆ ಸದಾ ಕಾಲ ಇರುವಂತದ್ದು ಎಂದರ್ಥ, ಇದನ್ನು ಅರ್ಥಮಾಡಿಕೊಳ್ಳದೆ ಒಟ್ಟಾರೆ ತಿರಸ್ಕರಿಸಿದವರು ಕೊನೆಗೊಂದು ದಿನ ಇದಕ್ಕೇ ಶರಣಾದ ಉದಾಹರಣೆಗಳನ್ನು ಕಥಾ ರೂಪದಲ್ಲಿ ವಿವರಿಸಿದರು. ಹಾವೇರಿ ಜಿಲ್ಲೆ ಅಗಡಿ ಆನಂದವನದ ವೇದ ಪಾಠಶಾಲಾ ನಿವೃತ್ತ ಪ್ರಾಚಾರ್ಯ ಶ್ರೀ ಶಂಕರ ಭಟ್ಟರು ಮತ್ತು ಋತ್ವಿಜರು ಸಹಸ್ರ ಮೋದಕ ಶ್ರೀ ಮಹಾಗಣಪತಿ ಹೋಮದ ನೇತೃತ್ವ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸೇರಿದ ಅಪಾರ ಭಕ್ತ ಸಮೂಹದ ಪರವಾಗಿ ಶ್ರೀ ಶಿವ ಚಿದಂಬರ ಸೇವಾ ಸಂಘದ ಉಮೇಶ ಕುಲಕರ್ಣಿ, ಸೋಮನಾಥ ಕುಲಕರ್ಣಿ, ವಿಜಯಕುಮಾರ್ ಜೋಶಿ, ವಿನಾಯಕ ಕುಲಕರ್ಣಿ, ರಾಘವೇಂದ್ರ ಆಚಾರ್ಯ ಮುಂತಾದವರು ಡಾ ಎಚ್ ಬಿ ಮಂಜುನಾಥರನ್ನು ಶ್ರೀ ಶಿವಚಿದಂಬರ ಫಲ ಮಾಲಿಕಾ ಸಹಿತ ಸನ್ಮಾನಿಸಿದರು.
