ವರ್ತಕರ ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ಸಂಸ್ಥೆಯು ನಿರಂತರ ಶ್ರಮಿಸುತ್ತಿದೆ ಎಂದು ದಿನಸಿ ವರ್ತಕರ ಸಂಘದ ಅಧ್ಯಕ್ಷ ಪಿ.ಎಸ್.ಹಾಲಸ್ವಾಮಿ ಹೇಳಿದರು.
ದಿನಸಿ ವರ್ತಕ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬೆಳದಿಂಗಳ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿ, ಸದಸ್ಯರು ವ್ಯಾಪಾರ ವಹಿವಾಟಿನ ಜತೆಯಲ್ಲಿ ವಿಶೇಷ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅಶ್ವಥ್ ನಾರಾಯಣ ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಸದಸ್ಯರ ಪಾತ್ರ ಬಹಳ ಪ್ರಮುಖವಾಗಿದೆ. ತುಂಬಾ ಚಿಕ್ಕದಾಗಿ ಪ್ರಾರಂಭಿಸಿ ಈಗ ಬೃಹದಾಕಾರವಾಗಿ ಈ ಸಂಸ್ಥೆ ಬೆಳೆದಿದೆ ಎಂದು ತಿಳಿಸಿದರು.
ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವರ್ತಕ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಶಿವಮೊಗ್ಗದಲ್ಲಿ 50 ವರ್ಷದಿಂದ ವ್ಯವಹಾರ ನಡೆಸುತ್ತಿರುವ 21ಕ್ಕೂ ಹೆಚ್ಚು ವರ್ತಕರ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ವರ್ತಕರ ಸಂಘದ ಮಾಜಿ ಅಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಬಲಮುರಿ ರಮೇಶಪ್ಪ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದರಾದ ವಸಂತ ಮಾಧವ್ ಹಾಗೂ ಆದ್ಯ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ದಿನಸಿ ವರ್ತಕರ ಸಂಘದ ಕಾರ್ಯದರ್ಶಿ ಎಂ.ಪಿ.ನಾಗರಾಜ, ಎಪಿಎಂಸಿ ಮಾಜಿ ಅಧ್ಯಕ್ಷ, ಸೂಡ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ದಿನಸಿ ವರ್ತಕರ ಸಂಘದ ನಿರ್ದೇಶಕರಾದ ರೇಣುಕಾ ಬಣಕಾರ, ಆನಂದ್, ಶ್ರೀಕಾಂತ್, ಪ್ರಸನ್ನ, ರಘುಪ್ರಸಾದ್, ನಂದಕುಮಾರ್, ನಟರಾಜ್ ತುಗ್ಗಲಹಳ್ಳಿ, ಸಿದ್ದಪ್ಪ, ರವಿ, ಶಿವಕುಮಾರ್, ರಮೇಶ್, ದೇವರಾಜ್, ಅಶೋಕ್, ಚನ್ನವೀರಪ್ಪ, ಅರ್ಚನಾ ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.
