Thursday, June 18, 2026
Thursday, June 18, 2026

ಎಐ ತಂತ್ರಜ್ಞಾನ:ಪೂರಕ ಕೌಶಲ್ಯ ಮತ್ತು ಜ್ಞಾನ ಹೆಚ್ಚಿಸಿಕೊಂಡಲ್ಲಿ ಸಮಸ್ಯೆ ನಿವಾರಿಸಬಹುದು- ಸಿ.ಎಸ್.ಷಡಕ್ಷರಿ

Date:

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಆಧುನಿಕ ಜಗತ್ತಿನ ಅತಿದೊಡ್ಡ ಕ್ರಾಂತಿಯಾಗಿದ್ದು, ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಭಾವಿ ಶಿಕ್ಷಕರಾಗಿರುವ ಪ್ರಶಿಕ್ಷಣಾರ್ಥಿಗಳು ಡಿಜಿಟಲ್ ಸಾಕ್ಷರತೆ, ಕೌಶಲ್ಯತೆ ಮೂಲಕ ಎಐ ತಂತ್ರಜ್ಞಾನದ ಸವಾಲು ಸ್ವೀಕರಿಸಿ ಯಶಸ್ಸು ಸಾಧಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಕರೆ ನೀಡಿದರು.

ಶಿವಮೊಗ್ಗ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಎಐ ತಂತ್ರಜ್ಞಾನ ಉದ್ಯೋಗಾವಕಾಶಗಳ ಮೇಲೆ ಪ್ರಭಾವ ಬೀರಲಿದ್ದು, ಯಾಂತ್ರೀಕರಣದಿಂದಾಗಿ ಸಾಂಪ್ರದಾಯಿಕ ಉದ್ಯೋಗಗಳು ಕಡಿಮೆಯಾಗುವ ಸಾಧ್ಯತೆ ಇದೆ. ಹೊಸ ತಂತ್ರಜ್ಞಾನಕ್ಕೆ ಪೂರಕವಾಗಿ ಕೌಶಲ್ಯ ಮತ್ತು ಜ್ಞಾನ ಹೆಚ್ಚಿಸಿಕೊಂಡಲ್ಲಿ ಸಮಸ್ಯೆ, ಸಂಕೋಲೆಗಳನ್ನು ಸಮರ್ಥವಾಗಿ ಎದುರಿಸಬಹುದು.

ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿನ ಕೆಲಸಗಳಿಗೆ ಜೋತು ಬೀಳದೆ ಸ್ವಸಾಮರ್ಥ್ಯದ ಮೇಲೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದೆಂದರು.

ದುಡ್ಡೇ ದೊಡ್ಡಪ್ಪ ಎನ್ನುವ ಕಾಲ ಇದಲ್ಲ. ಇದು ಜ್ಞಾನಕ್ಕೆ ಮನ್ನಣೆ ಇರುವ ಕಾಲಮಾನ. ಆಲೋಚನೆ, ಯೋಜನೆ, ಯೋಚನೆ ಮೂಲಕ ವ್ಯವಸ್ಥೆ ರೂಪಿಸುವ ಶಕ್ತಿ ಹೊಂದಿದವರಿಗೆ ಮನ್ನಣೆ, ಮಾನ್ಯತೆ ದೊರೆಯುತ್ತಿದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನು ಬಳಸಿಕೊಳ್ಳುವವರಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ ಎಂದರು.

ಒಂದು ಕಾಲಘಟ್ಟದಲ್ಲಿ ರಾಜ್ಯದಲ್ಲಿ 700ರಿಂದ 800 ಡಿಇಡಿ ಕಾಲೇಜುಗಳಿದ್ದವು. ಆದರೆ ಈ ಕಾಲೇಜುಗಳು ಬಹುತೇಕ ಮುಚ್ಚಿವೆ. ಜಿಲ್ಲೆಯಲ್ಲಿ ಡಯಟ್‌ನಲ್ಲಿ ಮಾತ್ರ ಡಿಇಡಿ ಇದ್ದು, ನಾಲ್ವರು ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ದಾಪುಗಾಲು ಇಡುತ್ತಿರುವುದರಿಂದ ಬಿಇಡಿ ಕಾಲೇಜಿಗೂ ಸಹ ಇದೇ ಪರಿಸ್ಥಿತಿ ಬರಬಹುದು. ಪ್ರಶಿಕ್ಷಣಾರ್ಥಿಗಳಿಗೆ ಕಠಿಣ ಸವಾಲು ಎದುರಾಗಬಹುದು. ಆದರೆ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗದೆ ಬುದ್ದಿವಂತಿಕೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ಅಕಾಡೆಮಿಕ್ ಜ್ಞಾನ ಇದ್ದರಷ್ಟೇ ಸಾಲದು. ಬದುಕಿನ ಕೌಶಲ್ಯತೆ, ಸಮಸ್ಯೆ ಮತ್ತು ಸಮಸ್ಯೆಗಳನ್ನು ಎದೆಗುಂದದೆ ಎದುರಿಸುವ ಸದೃಢ ಮನೋಭಾವ, ದೇಶಭಕ್ತಿ, ಸೇವಾ ಮನೋಭಾವ, ಸಾಮಾಜಿಕ ಕಾಳಜಿ ಇರಬೇಕು. ಇವುಗಳನ್ನು ಕಲಿಸುವ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸುತ್ತದೆ. ಈ ಕಾರಣಕ್ಕಾಗಿಯೇ ಪ್ರತಿ ಕಾಲೇಜುಗಳಲ್ಲಿ ಎನ್‌ಎಸ್‌ಎಸ್ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ಹೇಳಿದರಲ್ಲದೆ ತಾವೂ ಸಹ ಕಾಲೇಜು ಓದುವಾಗ ಎನ್‌ಎಸ್‌ಎಸ್ ಸೇವಾರ್ಥಿಯಾಗಿದ್ದನ್ನು ಸ್ಮರಿಸಿಕೊಂಡರು.

ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಪಿ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ದಜೆ.ಎಲ್. ಪದ್ಮನಾಭ್, ಎನ್.ಎ. ಮಾದೇಶ್ ಹೆಗ್ಡೆ, ಎನ್.ಹೆಚ್. ನಾಗರಾಜ್ ನೀರುಳ್ಳಿ, ಬೇಳೆಗದ್ದೆ ಪ್ರಭಾಕರ್, ಪ್ರಾಂಶುಪಾಲ ಡಾ.ಜಿ. ಮಧು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಕೆ.ಪಿ. ಶಾರದಾ, ಶಿಕ್ಷಕರ ಸಂಘದ ದಿನೇಶ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎನ್.ಜೆ. ಪ್ರಕಾಶ್, ಮಹಾವಿದ್ಯಾಲಯದ ಕಚೇರಿ ಮೇಲ್ವಿಚಾರಕಿ ಕಾವ್ಯ, ಕೆ.ಎಸ್. ಸಂಜಯ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...