Shivamogga News ಪಂಚಾಂಗ ಶ್ರವಣದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ನಮ್ಮ ಎಲ್ಲಾ ಕಾರ್ಯಗಳು ಶ್ರವಣದಿಂದ ಆಗುವುದು, ಪಂಚಾಂಗ ಕೇಳುವುದರಿಂದ ನಮ್ಮ ಶತ್ರುಗಳನ್ನು ದೂರ ಮಾಡುತ್ತದೆ. ಗಂಗಾ ಸ್ನಾನ ಮಾಡಿದಷ್ಟು ಮತ್ತು ಗೋ ದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ ಎಂದು ನಿವೃತ್ತ ಉಪನ್ಯಾಸಕರಾದ ವಿದ್ವಾನ್ ಜಿ.ಎಸ್.ನಟೇಶ್ ಅಭಿಮತ ವ್ಯಕ್ತಪಡಿಸಿದರು.
ಗುರುವಾರ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಯುಗಾದಿ ಹೊಸ ವರ್ಷದ ಅಂಗವಾಗಿ ಹಮ್ಮಿಕೊಳ್ಳಲಾದ ವರ್ಷದ ಫಲ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪಂಚಾಂಗ ಶ್ರವಣದಿಂದ ಪುಣ್ಯ ಲಭಿಸುತ್ತದೆ. ಅಲ್ಲದೆ, ಪಂಚಾಂಗ ಶ್ರವಣ ಪುಣ್ಯ ಪ್ರದ, ಕೆಟ್ಟ ಸ್ವಪ್ನಗಳನ್ನು ದೂರ ಮಾಡುತ್ತದೆ, ಆಯುಷ್ಯ ಹೆಚ್ಚಾಗುತ್ತದೆ. ಈ ರೀತಿ ಹಲವಾರು ಸತ್ ಕಾರ್ಯಗಳು ನಡೆಯುವುದರ ಜೊತೆಗೆ ನಮಗೆ ಎಲ್ಲಾ ಫಲ ಲಭಿಸುತ್ತದೆ ಎಂದು ತಿಳಿಸಿದರು.
ಪಂಚಾಂಗವನ್ನು ಕೇವಲ ಈ ಯುಗಾದಿಯಲ್ಲಿ ಶ್ರವಣ ಮಾಡುವುದರ ಜೊತೆಯಲ್ಲಿ ಹಿರಿಯರು ತಿಳಿಸಿದ ಹಾಗೆ ನಿತ್ಯ ಪಂಚಾಂಗ ಶ್ರವಣದಿಂದ ನಮಗೆ ಸನ್ಮಾರ್ಗ ಹಾಗೂ ಸರಿಯಾದ ಮಾಹಿತಿ ದೊರಕುತ್ತದೆ ಎಂದು ತಿಳಿಸಿದರು.
ಜೊತೆಗೆ ರಾಶಿ ಫಲಗಳು ಹಾಗೂ ಮಳೆ ಬೆಳೆ ಹಾಗೂ ಸಾಮಾಜಿಕ ಲೆಕ್ಕಾಚಾರಗಳು ಪಂಚಾಂಗದ ಪ್ರಕಾರ ಮುಂದೆ ಆಗಬಹುದಾದ ಆಗುಹೋಗುಗಳ ಬಗ್ಗೆ ತಿಳಿಸಿದರು.
Shivamogga News ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ರಾಮಲಿಂಗಪ್ಪನವರು ಮಾತನಾಡಿ, ನಮ್ಮ ದೇವಸ್ಥಾನದಲ್ಲಿ ಪ್ರತಿಯೊಂದು ಹಬ್ಬ, ಹರಿದಿನಗಳು ವಿಶೇಷ ದಿನಗಳಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳು, ವಿಧಿ ವಿಧಾನಗಳು ಕ್ರಮಬದ್ಧವಾಗಿ ಭಕ್ತರಿಗೆ ದೊರಕುತ್ತದೆ ಎಂದರು.
ಜಿ.ಎಸ್.ನಟೇಶ್ ರವರ ಉಪನ್ಯಾಸ ನಮಗೆ ಆತ್ಮಶಕ್ತಿ, ಸ್ಪೂರ್ತಿ ಹೆಚ್ಚಿಸುತ್ತದೆ. ಈ ವಿಶ್ವಾಸ ಹಾಗೂ ಮಹಾ ಪೂಜೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರಿಗೆ ದೇವಸ್ಥಾನದ ಸಮಿತಿಯ ಎಲ್ಲಾ ಪದಾಧಿಕಾರಿಗಳು ಧನ್ಯವಾದ ತಿಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ ಉಪಾಧ್ಯ ಅವರು ಯುಗಾದಿ ಹಬ್ಬದ ಮಹತ್ವ ತಿಳಿಸಿದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ನಿರ್ದೇಶಕ ಮಂಜುನಾಥ, ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
