ರಾಜ್ಯದಲ್ಲಿ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ, ಆನ್ಲೈನ್ ಬುಕಿಂಗ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವ ಡಾ. ಮುರುಗನ್ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವಾರ್ತಾ ಸಚಿವರಾದ ಅಶ್ವಿನ್ ವೈಷ್ಣವ್, ರೈಲ್ವೆ ಸಚಿವರು ಸೇರಿದಂತೆ ಸಂಬಂದಿಸಿದ ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳ ಕುರಿತಾಗಿ ಗಮನ ಸೆಳೆಯಲಾಗುವುದು ಎಂದರು.
ನೂತನ ಜಾಹೀರಾತು ನೀತಿ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲಿ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಹಿತ ಕಾಯಲು ಬದ್ಧ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿವರ ಕೇಳಿ ಪಡೆದ ಅವರು, ಪತ್ರಕರ್ತರ ಹಿತ ಕಾಯುವಲ್ಲಿ ಸಂಘವು ನಡೆಸುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಎಸ್. ಎನ್. ಚನ್ನಬಸಪ್ಪರವರು, ಪತ್ರಕರ್ತರ ಬೇಡಿಕೆಗಳ ಕುರಿತಾಗಿ ಸಚಿವರಲ್ಲಿ ಸಹಾನುಭೂತಿಯಿಂದ ಮಾತನಾಡಿದರು.
ಸಚಿವರ ಜೊತೆಗೆ ಸಂಸದ ಬಿ. ವೈ. ರಾಘವೇಂದ್ರರವರಿಗೂ ಮನವಿ ಅರ್ಪಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ವೈದ್ಯನಾಥ್ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಕಾರ್ಯದರ್ಶಿ ಸೋಮನಾಥ್, ದೀಪಕ್ ಸಾಗರ್, ಸತ್ಯನಾರಾಯಣಪ್ಪ, ನಾಗರಾಜ ಶಣೈ, ಅತೀಕ್ ಉಲ್ಲಾ ಖಾನ್, ಶಿವಮೊಗ್ಗ ಯೋಗರಾಜ್, ಸ್ಪಂದನ ಚಂದ್ರು, ಶಿವಮೊಗ್ಗ ನಾಗರಾಜ್, ಎಸ್. ಕೆ. ದಿನೇಶ್, ರಾಘು, ಮಂಜುನಾಥ್ ಸೇರಿದಂತೆ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು, ವಿದ್ಯುನ್ಮಾನ ಮಾಧ್ಯಮ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ ಇತ್ಯಾದಿ ಬೇಡಿಕೆಗಳ ಬಗ್ಗೆ ಇಲಾಖೆಯೊಂದಿಗೆ ಚರ್ಚೆ- ಸಚಿವ ಎಲ್.ಮುರುಗನ್
Date:
