ಸಂಬಂಧದೊಳಗಿನ ಬಂಧನ:
Klive Special Article ಸಂಭಂದ ಅಂದ್ರೆ ಏನು ಎಂದು ಯೋಚನೆ ಮಾಡುತ್ತಾ ಕುಳಿತಾಗ, “ಬಂಧಗಳನ್ನು ಸೇರಿಸಿದಾಗ ಸಿಗೋದೇ ಸಂಬಂಧ” ಅನ್ನೋ ಕಲ್ಪನೆ ಮನಸ್ಸಿಗೆ ಬರುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ಸಂಭಂದಗಳೇ ಬಂಧನ ಅನ್ನೋ ಮನಸ್ಥಿತಿ ಹೆಚ್ಚಾಗಿ ಕಾಣಿಸುತ್ತಿದೆ. ಯಾರಿಗೂ ಯಾರೂ ಬೇಕಿಲ್ಲ ಅನ್ನೋ ಭಾವನೆ ಬೆಳೆದುಬಿಟ್ಟಿದೆ.
ಸಂಭಂದ ಅನ್ನೋ ಪದದ ಮೂಲ ಹುಡುಕುತ್ತ ಹೋದರೆ, “ಕೋಳಿ ಮೊದಲಾ, ಮೊಟ್ಟೆ ಮೊದಲಾ” ಅನ್ನೋ ಗೊಂದಲದಂತೆಯೇ ಇದು. ಹಾಗಾದರೆ ಸಂಭಂದದ ಆರಂಭ ಎಲ್ಲಿ? ಯಾರಿಂದ ಶುರು? ಇದು ಉತ್ತರವಿಲ್ಲದ ಪ್ರಶ್ನೆಯಂತೆಯೇ. ಭೂಮಿಯ ಮೇಲಿರುವ ಎಲ್ಲ ಜೀವಿಗಳನ್ನೂ ದೇವರ ಸೃಷ್ಟಿ ಎಂದು ನೋಡಿದರೆ, ಇಲ್ಲಿ ಇರುವ ಎಲ್ಲರೂ ಪರಸ್ಪರ ಸಂಬಂಧಿಕರೇ, ಎಲ್ಲರೂ ನಮ್ಮವರೇ.
ಹೀಗಿರುವಾಗ, ಯಾಕೆ ಇಷ್ಟು ಭಿನ್ನಾಭಿಪ್ರಾಯಗಳು?
ಯಾಕೆ “ನನ್ನದು”, “ನಾನು” ಅನ್ನೋ ಅಹಂಕಾರ?
ಯಾಕೆ ಮೇಲು–ಕೀಳು ಅನ್ನೋ ಭಾವನೆ?
ಎಲ್ಲವನ್ನೂ ಕೊಡುವುದು ದೇವರು. ನಮ್ಮದು ಅನ್ನೋದೇನೂ ಇಲ್ಲ ಇಲ್ಲಿ. ಇರುವಷ್ಟು ದಿನ ಎಲ್ಲರ ಒಳಿತನ್ನೇ ಬಯಸುತ್ತ, ಸಂತೋಷದಿಂದ ಬದುಕಿದರೆ ಎಷ್ಟು ಚೆನ್ನ. ಬರುವಾಗ ಒಂಟಿಯಾಗಿ ಬರುತ್ತೇವೆ, ಹೋಗುವಾಗಲೂ ಒಂಟಿಯಾಗೇ ಹೋಗುತ್ತೇವೆ. ಮಧ್ಯದಲ್ಲಿ ಅಪ್ಪ–ಅಮ್ಮ, ತಮ್ಮ–ತಂಗಿ, ಅಣ್ಣ–ಅಕ್ಕ, ಗಂಡ-ಹೆಂಡತಿ, ಮಕ್ಕಳು, ಅತ್ತೆ–ಮಾವ, ಗೆಳೆಯರು… ಹೀಗೆ ಅನೇಕ ಸಂಬಂಧಗಳು ನಮ್ಮ ಜೀವನಕ್ಕೆ ಬಂದು ಹೋಗುತ್ತವೆ. ಇದ್ದಷ್ಟು ದಿನ ನಗುತ್ತಾ, ಎಲ್ಲರನ್ನು ನಗಿಸುತ್ತಾ ಬದುಕಲು ಯಾಕೆ ಸಾಧ್ಯವಾಗಬಾರದು?
ನಮ್ಮದು ಅನ್ನೋದು ಶಾಶ್ವತ ಅಲ್ಲ ಅನ್ನೋದು ಗೊತ್ತಿದ್ದರೂ, ಯಾಕೆ ದ್ವೇಷ, ಕೋಪ, ಭಿನ್ನಾಭಿಪ್ರಾಯ? ಸಿ. ಅಶ್ವಥ್ ಅವರು ಹಾಡಿದ ಹಾಡಿನಂತೆ “ಒಳಿತು ಮಾಡು ಮನುಷಾ, ನೀ ಇರೋದು ಮೂರು ದಿವಸಾ ” , “ಮೂರು ದಿನದ ಜೀವನವೆಂಬ ಸಂತೆಯಲ್ಲಿ, ದ್ವೇಷವೆಂಬ ಕಂತೆಯನ್ನು ಸುಟ್ಟು ಹಾಕಿ ನಗು ನಗುತ್ತ ಬದುಕೋದು ಯಾಕೆ ಕಷ್ಟ” .
ಒಬ್ಬ ಶ್ರೀಮಂತನ ಕಥೆ ಕೇಳಿದ್ದೇನೆ—ಅವನು ಅಪಾರ ಸಂಪತ್ತು ಗಳಿಸಿದ್ದ, ಆದರೆ ಸಂಪತ್ತು ಗಳಿಸುವ ಭರದಲ್ಲಿ ಎಲ್ಲರ ಪ್ರೀತಿಯನ್ನು ಗಳಿಸಲು ಮರೆತೇಬಿಟ್ಟ, ಅವನು ಮರಣಹೊಂದಿದಾಗ ಅವನ ಚಟ್ಟ ಹೊರಲು ಬಂದಿದ್ದು ಮೂವರು ಮಾತ್ರ! ಜನರ ಪ್ರೀತಿಯನ್ನು ಸಂಪಾದನೆ ಮಾಡಲು ಆಗದಂತಹ ಶ್ರೀಮಂತಿಕೆ ಯಾಕೆ ಬೇಕು?
ಸತ್ತಮೇಲೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ. ಇರುವಾಗ ಬೇಕಾದದ್ದು ಸಂಭಂದಗಳನ್ನ ಉಳಿಸಿಕೊಳ್ಳೋ ಪ್ರಯತ್ನ. ನಾವು ಸತ್ತಮೇಲೆ ಜನ ಎಷ್ಟು ದಿನ ಅಳ್ತಾರೆ? ಒಂದು ದಿನ, ಒಂದು ವಾರ, ಮೂರು ತಿಂಗಳು… ನಂತರ ಪರಿಸ್ಥಿತಿ ಎಲ್ಲವನ್ನೂ ಮರೆಸುತ್ತದೆ. ವರ್ಷಕ್ಕೆ ಒಮ್ಮೆ ನೆನಪಾಗೋದು ಕೂಡಾ ಕಷ್ಟಕರ ಅನ್ನೋ ಬಾಳು ನಮ್ಮ ಜೀವನ. ಯಾರಾದರೂ ನಮಗೆ ಆಗೋದೇ ಇಲ್ಲ ಅಂದ್ಕೊಂಡರೆ ಇರೋದು ಎರಡು ಮಾರ್ಗ—ಮಾತಾಡದೆ ಇರೋದು, ಅಥವಾ ಅಪಪ್ರಚಾರ ಮಾಡದೇ ದೂರವಿರೋದು. ಆದರೆ ದ್ವೇಷಿಸೋದು, ಕೋಪ ಮಾಡಿಕೊಳ್ಳೋದು, ಮನಸ್ಸು ಹಾಳು ಮಾಡಿಕೊಳ್ಳೋದು—ಇವುಗಳಿಂದ ಏನು ಲಾಭ?
Klive Special Article ” ದ್ವೇಷ ” ಮಾಡಿದರೂ ಸಾಯ್ತೀವಿ, ಪ್ರೀತಿ ಮಾಡಿದರೂ ಸಾಯ್ತೀವಿ, ಹಾಗಿದ್ದಾಗ ಯಾಕೆ ದ್ವೇಷದ ಹೊರೆ ಹೊತ್ತು ಬದುಕಬೇಕು? ದ್ವೇಷವಿರುವ ವ್ಯಕ್ತಿಯ ಜೊತೆ ಒಮ್ಮೆ ಪ್ರೀತಿಯಿಂದ ಮಾತನಾಡಿದರೆ, ಅವರ ಮನಸ್ಸು ಕೂಡಾ ಬದಲಾಗೋ ಸಾಧ್ಯತೆ ಇದೆ. ಇಷ್ಟು ಸುಲಭವಾಗಿ ಉಳಿಸಬಹುದಾದ ಸಂಬಂಧವನ್ನು ಯಾಕೆ ಭಿನ್ನಾಭಿಪ್ರಾಯಗಳಿಂದ ಹಾಳು ಮಾಡಿಕೊಳ್ಳಬೇಕು? ಭಾಂದವ್ಯ ಅನ್ನೋದು ಅಷ್ಟು ಸುಲಭವಾಗಿ ಬರೋಲ್ಲ ಅಲ್ಲವೇ, ಒಮ್ಮೆ ನಮ್ಮವರು, ನಮ್ಮ ಪ್ರೀತಿಪಾತ್ರರು ಅನ್ನೋ ಮನಸ್ಥಿತಿ ಬಂದಮೇಲೆ ಸಂಭಂದ ಉಳಿಸೋದು ಅಷ್ಟು ಕಷ್ಟವಲ್ಲ. ಬೇಕಾಗಿರುವುದು ಪ್ರೀತಿಯ ಮಾತು, ನಂಬಿಕೆ, ವಿಶ್ವಾಸ..
ಒಂದು ಸಂಭಂದ ಕೆಟ್ಟರೆ, ಅದಕ್ಕೆ ಇಬ್ಬರೂ ಕಾರಣ. ಎರಡೂ ಕೈ ಇಲ್ಲದೇ ಚಪ್ಪಾಳೆಯಾಗಲು ಸಾಧ್ಯವೇ? ಇದಕ್ಕೆ ಪ್ರಮುಖ ಕಾರಣ “ನಾನು” ಅನ್ನೋ ಅಹಂಕಾರ. “ನಾನೇ ಏಕೆ ಬಗ್ಗಬೇಕು?” ಅನ್ನೋ ಹಠ. ಸಂಭಂದ ಉಳಿಸಬೇಕಾದರೆ ಒಬ್ಬರು ಬಗ್ಗಬೇಕು ಅಥವಾ ಇಬ್ಬರೂ ಬಗ್ಗಬೇಕು; ಅಷ್ಟೂ ಮಾಡಲು ಸಾಧ್ಯವಿಲ್ಲ ಅಂದರೆ ಅದು ನಿಜವಾದ ಸಂಭಂದವೇ? ಅಥವಾ ಕೇವಲ ಬಂಧನವೇ?
ಅಹಂಕಾರ ಇರುವ ತನಕ ಸಂಭಂದ ಗಟ್ಟಿ ಆಗೋದಿಲ್ಲ. “ನಾನು ” “ನನ್ನದು” ಅನ್ನೋ ಅಹಂಕಾರವೇ ಸಂಭಂದಗಳನ್ನು ಮುರಿಯುತ್ತದೆ. ಎಲ್ಲರಿಗಾಗಿ ಬದುಕಬೇಕು. ನಮಗೆ ಬದುಕುವ ಹಕ್ಕು ಇದ್ದಂತೆ ಎಲ್ಲರಿಗೂ ಇರುತ್ತದೆ. ಎಲ್ಲರೂ ನಮ್ಮವರೇ ಅನ್ನೋ ಮನಸ್ಸು ಸಂಭಂದಗಳನ್ನು ಜೋಡಿಸುವ ಮೂಲ. ಪ್ರೀತಿ ಕೊಟ್ಟು ಪ್ರೀತಿ ಪಡೆಯಬೇಕು. ನಂಬಿಕೆಗೆ ಅರ್ಹರಾಗಿ ನಂಬಿಕೆ ಗಳಿಸಬೇಕು. ಪ್ರೀತಿ ಮತ್ತು ನಂಬಿಕೆ—ಇವೇ ಸಂಭಂದದ ತಳಹದಿ. ಅಪನಂಬಿಕೆ ಬಂದ ಕ್ಷಣದಿಂದಲೇ ಸಂಭಂದದಲ್ಲಿ ಬಿರುಕುಮೂಡುತ್ತದೆ. ಸಂಭಂದಗಳಲ್ಲಿ ಗಳಿಸಿದ ಪ್ರೀತಿ–ವಿಶ್ವಾಸವನ್ನು ಸಣ್ಣ ಪುಟ್ಟ ವಿಷಯಗಳಿಗಾಗಿ ನಾಶ ಮಾಡಿಕೊಳ್ಳದೇ ಸಾಗೋದು ಜೀವನದ ಉತ್ತಮ ಮಾರ್ಗ. ಪರಸ್ಪರ ಪ್ರೀತಿ ಗೌರವ ನಂಬಿಕೆ ಇವುಗಳೇ ಉತ್ತಮ ಬಾಂಧವ್ಯದ ಬುನಾದಿ. ಎಲ್ಲರೂ ನಮ್ಮವರೆಂದು ಪ್ರೀತಿಸುತ್ತ, ಇರುವಷ್ಟು ದಿನ ಸಂತೋಷವಾಗಿ ಬದುಕೋಣ.
