ಲೇ: ಡಾ.ರಾಮಕೃಷ್ಣ ಮುದ್ದೇಪಾಲ.
ಲೇಖನಮಾಲೆ ಭಾಗ 2
ಧರ್ಮದ ಪರಿಕಲ್ಪನೆ ಮತ್ತು ಆಚರಣೆ ದೃಢವಾಗಿದ್ದ ಒಂದು ಕಾಲದಲ್ಲಿ ಅಪರಾಧರಹಿತ ಮತ್ತು ಪಾಪರಹಿತ ಸಮಾಜವಿದ್ದಿರಬಹುದು. ತ್ರೇತಾಯುಗದ ರಾಮರಾಜ್ಯ ಪಾಪರಹಿತವಾಗಿತ್ತೆಂದು ವಾಲ್ಮೀಕಿ ಮಹರ್ಷಿಗಳು ಉಲ್ಲೇಖಿಸಿದ್ದಾರೆ.
ಇಂತಹ ಸನ್ನಿವೇಶವನ್ನು ಅಥವಾ ಆಶಯವನ್ನು ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳಿದ ಈ ಮಾತಿನಿಂದಲೂ ಗ್ರಹಿಸಬಹುದು.
ನ ರಾಜ್ಯಂ ನ ರಾಜಾಸೀತ್ ನ ದಂಡ್ಯೋ ನ ಚ ದಾಂಡಿಕಃI
ಧರ್ಮೇಣೈವ ಪ್ರಜಾ: ಸರ್ವಾಃ ರಕ್ಷಂತಿ ಸ್ಮ ಪರಸ್ಪರಂII
ರಾಜ್ಯವಿರಲಿಲ್ಲ , ರಾಜನೂ ಇರಲಿಲ್ಲ, ದಂಡಿಸಲ್ಪಡುವವನು ಇರಲಿಲ್ಲ, ದಂಡಿಸುವವನೂ ಇರಲಿಲ್ಲ ಧರ್ಮದಿಂದಲೇ ಪ್ರಜೆಗಳು ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರು.
ಮುಂದೇನಾಯಿತು? ಸಮಾಜ ಸಂಕೀರ್ಣವಾಗುತ್ತ ಜನರಲ್ಲಿ ಕಾಮ ಕ್ರೋಧ ಮೋಹಗಳು ಆವರಿಸಿದವು. ಧರ್ಮ ಹಿನ್ನೆಲೆಗೆ ಸರಿದ ಪರಿಣಾಮ ಅಪರಾಧಗಳು ಮುನ್ನೆಲೆಗೆ ಬಂದವು. ಹಾಗೆಯೇ ಅಪರಾಧಿಗಳನ್ನು ಶಿಕ್ಷಿಸುವ ವ್ಯವಸ್ಥೆ ಜಾರಿಗೆ ಬಂದಿತು. ಇಂದಿನ ನಮ್ಮ ದೇಶದ ಮತ್ತು ವಿಶ್ವದ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ, ಸುಧಾರಿತ ನ್ಯಾಯ ವ್ಯವಸ್ಥೆಯಿದ್ದರೂ ಅಪರಾಧಗಳು ಹೆಚ್ಚುತ್ತಿರುವುದು ಕಳವಳಕಾರೀ ಸಂಗತಿ.
ಭಾರತದ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದ ಪ್ರಕಾರ ೨೦೨೩ರಲ್ಲಿ ೭.೨% ಅಪರಾಧ ವೃದ್ಧಿ, ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧಗಳಲ್ಲಿ ಕ್ರಮವಾಗಿ ೪% ಮತ್ತು ೯.೨% ವೃದ್ಧಿ ಕಂಡುಬಂದಿರುತ್ತದೆ. ಶ್ವೇತಾಪರಾಧಗಳು ಮತ್ತು ಸೈಬರ್ ಅಪರಾಧಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅತ್ಯಂತ ವೇಗದಲ್ಲಿ ಬದಲಾಗುತ್ತಿರುವ ಆಧುನಿಕ ಸಮಾಜದಲ್ಲಿ ಅಪರಾಧದ ಪ್ರಮಾಣ ಮತ್ತು ಅಪರಾಧದ ಸ್ವರೂಪ ಎರಡರಲ್ಲೂ ಹೆಚ್ಚಳವಾಗುತ್ತಿರುವುದರಿಂದ ಅಪರಾಧರಹಿತ ಸಮಾಜವನ್ನು ಕಲ್ಪಿಸಲು ಸಾಧ್ಯವಿಲ್ಲದಿದ್ದರೂ ಅಪರಾಧಗಳ ಪ್ರಮಾಣವನ್ನು ತಗ್ಗಿಸಿ ಸಮಾಜದ ಹಿತಕಾಯುವುದು ಅಪರಾಧಶಾಸ್ತ್ರದ ಆಶಯ. ಅಪರಾಧವನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಆರಕ್ಷಕ ಇಲಾಖೆಯ ಹೊಣೆ. ಅಪರಾಧ ಘಟಿಸಿದ ನಂತರ ಅದನ್ನು ಪತ್ತೆಮಾಡಿ ಅಪರಾಧಿಗಳನ್ನು ನ್ಯಾಯಾಂಗ ವ್ಯವಸ್ಥೆಯ ಮುಖಾಂತರ ಶಿಕ್ಷೆಗೆ ಗುರಿಪಡಿಸುವುದು ಆರಕ್ಷಕರ ಆದ್ಯ ಕರ್ತವ್ಯವಾದರೂ ಅಪರಾಧ ನಡೆಯದಂತೆ ತಡೆಗಟ್ಟುವುದು ಆರಕ್ಷಕರ ಕಾರ್ಯಕ್ಷಮತೆಯ ದ್ಯೋತಕವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಹೊಣೆಗಾರಿಕೆಯೂ ಪ್ರಾಮುಖ್ಯತೆಯನ್ನು ಹೊಂದಿದೆ.
