ಲೇ : ಡಾ.ರಾಮಕೃಷ್ಣ ಮುದ್ದೇಪಾಲ
ಭಾಗ – 1
ಅಪರಾಧ ,ಪರಿಕಲ್ಪನೆ
ಭಗವದ್ಗೀತೆ ಭಾರತೀಯರಿಗೆ ಪವಿತ್ರ ಗ್ರಂಥ. ಅದರಲ್ಲಿನ ಸಂದೇಶಗಳು ಪ್ರಸ್ತುತವಾಗಿರುವ ಬಗ್ಗೆ ವಿದ್ವಾಂಸರು ತಮ್ಮ ಪ್ರವಚನ, ಬರವಣಿಗೆ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಇಂಥದೊಂದು ಪ್ರಯತ್ನವನ್ನ ಸೋಂದಾ – ಸ್ವರ್ಣವಲ್ಲಿ ಮಹಾಸಂಸ್ಥಾನದ ಪೂಜ್ಯ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು
ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಂಡಿದ್ದರು.
ಭಗವದ್ಗೀತಾ ಅಭಿಯಾನದ ವಿಶೇಷವಾಗಿ ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರವಾಗಿ ವಿಚಾರ ಸಂಕಿರಣವನ್ನ ಕುವೆಂಪು ವಿವಿಯಲ್ಲಿ ಏರ್ಪಡಿಸಲಾಗಿತ್ತು.
ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಮಕೃಷ್ಣ ಮುದ್ದೇಪಾಲ ಅವರು
ಅಪರಾಧ ನಿಯಂತ್ರಣದಲ್ಲಿ ಭಗವದ್ಗೀತೆಯ ಅಂಶಗಳು ಹೇಗೆ ಸಹಕಾರಿ ಎಂಬುದನ್ನ ಸೋದಾಹರಣ ಪ್ರಸ್ತುತಪಡಿಸಿದರು.
ಉಪನ್ಯಾಸ ಮಾಲಿಕೆಯಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗ ಇಲ್ಲಿದೆ.
Klive Special Article ಅಪರಾಧಶಾಸ್ತ್ರದ ದೃಷ್ಟಿಯಿಂದ ಭಗವದ್ಗೀತೆಯನ್ನು ಅಪರಾಧ ನಿಯಂತ್ರಣಕ್ಕೆ ಹೇಗೆ ಉಪಯೋಗಿಸಬಹುದು?
“ಅಪರಾಧ” ಎನ್ನುವ ಪರಿಕಲ್ಪನೆ ಮಾನವ ನಾಗರಿಕತೆಯಷ್ಟೇ ಪುರಾತನವಾದುದು. ನಮ್ಮ ಸ್ಮೃತಿಕಾರರು ವಿವಿಧ ರೀತಿಯ ಅಪರಾಧಗಳನ್ನು ಮತ್ತು ಅವುಗಳಿಗೆ ವಿಧಿಸಬಹುದಾದ ಶಿಕ್ಷೆಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಆಧುನಿಕ ಅಪರಾಧಶಾಸ್ತ್ರವು 19ನೇ ಶತಮಾನದಿಂದೀಚೆಗೆ ಬೆಳೆದು ಬಂದಿರುತ್ತದೆ. ಅಪರಾಧಶಾಸ್ತ್ರವನ್ನು ಸಮಾಜಶಾಸ್ತ್ರದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅಪರಾಧಶಾಸ್ತ್ರವು ಮಾನವನ ಅಪರಾಧ ವರ್ತನೆಯ ವೈಜ್ಞಾನಿಕ ಅಧ್ಯಯನವಾಗಿದ್ದರೂ ಕೂಡ ಅದು ಸ್ವತಃ ವಿಜ್ಞಾನವಲ್ಲ. ಯಾಕೆಂದರೆ ಅದು ಸಂಕೀರ್ಣ ಮತ್ತು ಸಾಪೇಕ್ಷ ವಿಷಯವಾಗಿದ್ದು ದೇಶ ಮತ್ತು ಕಾಲಮಿತಿಗೆ ಒಳಪಟ್ಟಿದೆ. ಅಪರಾಧಶಾಸ್ತ್ರವು ಸಮಾಜಶಾಸ್ತ್ರ, ಮನಃಶಾಸ್ತ್ರ, ಮಾನವ ಶಾಸ್ತ್ರ, ಕಾನೂನು, ಶಿಕ್ಷಾಶಾಸ್ತ್ರ, ಅಪರಾಧ ಸಂತ್ರಸ್ತಶಾಸ್ತ್ರ ಮತ್ತು ವಿಧಿವಿಜ್ಞಾನ ಈ ವಿಷಯಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು ಅದು ಅಪರಾಧಗಳ ಕಾರಣ, ನಿಗ್ರಹ ಮತ್ತು ಪರಿಹಾರವನ್ನು ಒಳಗೊಂಡಿರುತ್ತದೆ. ಅಪರಾಧಶಾಸ್ತ್ರ ಮತ್ತು ಅಪರಾಧಕ್ಕೆ ಹಲವಾರು ವ್ಯಾಖ್ಯೆಗಳನ್ನು ಕೊಟ್ಟಿದ್ದರೂ ಸಹ ಅವೆಲ್ಲವೂ ಅಪೂರ್ಣವಾಗಿವೆ ಕಾರಣ, ಅಪರಾಧಕ್ಕಿರುವ ಸಂಕೀರ್ಣತೆ ಮತ್ತು ಸಾಪೇಕ್ಷತೆ. ಆಧುನಿಕ ಮನುಷ್ಯನ ಜೀವನ ಸಂಕೀರ್ಣವಾದ ಹಾಗೆ ಅಪರಾಧಗಳು ಸಂಕೀರ್ಣವಾಗುತ್ತಿವೆ.
Klive Special Article ಅಪರಾಧಶಾಸ್ತ್ರದ ಪ್ರಕಾರ ಅಪರಾಧ ಒಂದು ಸಮಾಜವಿರೋಧಿ ಕೃತ್ಯ. ಯಾವುದೇ ಕೃತ್ಯವು ಸರ್ಕಾರದಿಂದ ಕಾನೂನುಬಾಹಿರವೆಂದು ಪರಿಗಣಿಸಲ್ಪಟ್ಟು ಅದಕ್ಕೆ ಶಿಕ್ಷೆ ವಿಧಿಸಲ್ಪಟ್ಟಿದ್ದರೆ ಆ ಕೃತ್ಯವನ್ನು ಅಪರಾಧವೆಂದು ಪರಿಗಣಿಸಬಹುದು. ಯಾವುದೇ ಕೃತ್ಯವು ಅಪರಾಧವೆಂದೆನಿಸಲು ಆ ಕೃತ್ಯದ ಹಿಂದೆ ಅಪರಾಧೀ ಮನಸ್ಸಿರಬೇಕು. ಅಪರಾಧವೆಸಗುವ ಮನಸ್ಸು, ಯೋಚನೆ ಅಥವಾ ಯೋಜನೆಯಿಲ್ಲದಿದ್ದರೆ ಆ ಕೃತ್ಯವನ್ನು ” ಸಾಮಾನ್ಯ ಅಪವಾದ ” ವೆಂದು ಪರಿಗಣಿಸಿ ಕಾನೂನಿನಲ್ಲಿ ಯಾವುದೇ ಶಿಕ್ಷೆಯನ್ನು ವಿಧಿಸಲಾಗುವುದಿಲ್ಲ. ಅಂದರೆ ಅಪರಾಧಿಗೆ ಕರ್ತೃತ್ವದ ಭಾವವಿರುತ್ತದೆ ಮತ್ತು ಅಪರಾಧದ ಉದ್ದೇಶ ಮುಖ್ಯವಾಗುತ್ತದೆ. ಕರ್ಮಫಲದ ಕುರಿತು ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಮಾತು ಗಮನಾರ್ಹ.
ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇI
ಹತ್ವಾsಪಿ ಸ ಇಮಾಂಲ್ಲೋಕಾನ್ನ ಹಂತಿ ನ ನಿಬಧ್ಯತೇII18.17II
ಯಾವನಿಗೆ ನಾನು ʼಕರ್ತೃʼ ಎಂಬ ಭಾವವಿರುವುದಿಲ್ಲವೋ, ಯಾವನ ಬುದ್ಧಿಯು ಲಿಪ್ತವಾಗುವುದಿಲ್ಲವೋ ಅಂಥವನು ಈ ಲೋಕಗಳನ್ನು ಕೊಂದರೂ ಕೊಲ್ಲುವುದಿಲ್ಲ, ಬಂಧಿಸಲ್ಪಡುವುದಿಲ್ಲ.
ʼಅಪರಾಧʼ ಕಾನೂನಿನ ವಿಷಯವಾದರೆ ʼಪಾಪʼವನ್ನು ನೈತಿಕ ಮತ್ತು ಧಾರ್ಮಿಕ ನೆಲೆಯಲ್ಲಿ ನೋಡಬೇಕಾಗುತ್ತದೆ. ಉದಾಹರಣೆಗೆ ಸುಳ್ಳು ಹೇಳುವುದು ನೈತಿಕ ದೃಷ್ಟಿಯಿಂದ ಪಾಪವಾದರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧವೆನಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲ ಅಪರಾಧಗಳು ಪಾಪಕೃತ್ಯಗಳಾಗುತ್ತವೆ. ಆದರೆ ಎಲ್ಲ ಪಾಪಕೃತ್ಯಗಳು ಅಪರಾಧಗಳಾಗುವುದಿಲ್ಲ.
ಕೇವಲ ಮಾನಸಿಕ ಕ್ರಿಯೆ ಪಾಪವಾಗಬಹುದು ಆದರೆ ಅಪರಾಧವಾಗುವುದಿಲ್ಲ.
ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್I
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇII3.6II
ಯಾವನು ಕರ್ಮೇಂದ್ರಿಯಗಳನ್ನು ನಿಗ್ರಹಿಸಿ ಇಂದ್ರಿಯವಿಷಯಗಳನ್ನು ಮನಸ್ಸಿನಿಂದ ಸ್ಮರಿಸುತ್ತಿರುವನೋ ಅವನು ವಿಮೂಢಾತ್ಮನೆಂದೂ ಮಿಥ್ಯಾಚಾರನೆಂದೂ ಹೇಳಲ್ಪಡುತ್ತಾನೆ.
ಅಪರಾಧ ಮತ್ತು ಪಾಪ ಇವೆರಡೂ ಸ್ಥಳದಿಂದ ಸ್ಥಳಕ್ಕೆ ಮತ್ತು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುವುದನ್ನು ಗಮನಿಸಬಹುದು.
