Wednesday, December 17, 2025
Wednesday, December 17, 2025

Klive Special Article ಗೀತ ನೃತ್ಯಗಳ ಮೂಲಕ ಮನಸೆಳೆದ ಶ್ರೀಶಾರದಾ ಸಂಗೀತ- ನೃತ್ಯ ವಿದ್ಯಾಲಯದ ರಂಗ ಪ್ರಸ್ತುತಿ

Date:

Klive Special Article ವಿಜಯವಾಣಿ ಪತ್ರಿಕೆಯ ರವಿಕಾಂತ್ ಕುಂದಾಪುರ ವಾಟ್ಸಾಪ್ ಡೀಪಿಯಲ್ಲಿ ಹೀಗೆ ಇತ್ತು -“ಈ ಬದುಕೇ ಒಂದು ಕುರುಕ್ಷೇತ್ರ ಇಲ್ಲಿ ಹಿಂಜರಿಯುವ ಅರ್ಜುನನು ನಾನೇ ಹುರಿದುಂಬಿಸುವ ಶ್ರೀ ಕೃಷ್ಣನೂ ನಾನೇ”. ಈ ಮಾತು ಅದೆಷ್ಟು ಬಾರಿ ಓದಿದರೂ ನಿಜ ಎನ್ನಿಸಿತು. ಏಕೆಂದರೆ ಎಂದೋ
ಬೋಧಿಸಿದ ಗೀತೆ ಇಂದಿಗೂ ಪ್ರಸ್ತುತ ಅನಿಸುವುದು ಇದೇ ಕಾರಣಕ್ಕೆ. ಅಲ್ಲದೇ ಇಲ್ಲಿ ಅರ್ಜುನನ್ನು ಸಾಂಕೇತಿಕವಾಗಿಟ್ಟುಕೊಂಡು ನಮ್ಮ ಜೀವನ ಕ್ರಮ ಹೇಗಿರಬೇಕು? ನಾವೇನು ಮಾಡಬೇಕು? ಏನು ಮಾಡಬಾರದು? ಯಾವಾಗ ಮಾಡಬೇಕು? ಏಕೆ ಮಾಡಬೇಕು ಎಂಬುದನ್ನು ಬಹಳ ಸ್ಪಷ್ಟವಾಗಿ, ಸರಳವಾಗಿ ವ್ಯಾಸ ಮಹರ್ಷಿಗಳ ಕೈಯಿಂದ ನಮಗೆ ಗೀತೆಯನ್ನು ಭಗವಂತ ಕರುಣಿಸಿದ್ದಾನೆ . ಪ್ರತಿಯೊಂದು ದೇಶದಲ್ಲೂ ಒಂದೊಂದು ಸಂವಿಧಾನ ಇದ್ದಂತೆ ನಮ್ಮ ದೇಶಕ್ಕೂ ಇದೆ. ಅದರಂತೆ ಎಲ್ಲಾ ದೇಶಕ್ಕೂ, ಎಲ್ಲಾ ವರ್ಗಕ್ಕೂ, ಎಲ್ಲರಿಗೂ ಕೂಡ ಅನ್ವಯವಾಗುವಂತಹ ಸಂವಿಧಾನ ಅನ್ನೋದು ಏನಾದರೂ ಇದ್ದರೆ ಅದು ಭಗವದ್ಗೀತೆಯೇ ಆಗಿದೆ. ಸರ್ವರಿಗೂ ಸಮಾನವಾಗಿ ಅನ್ವಯವಾಗುವ ಉಪದೇಶ, ನೀತಿ ಭಗವದ್ಗೀತೆಯಲ್ಲಿರುವುದರಿಂದ ಇದು ಇಂದಿಗೂ ಪ್ರಸ್ತುತ. ಜೀವನದ ಜಂಜಾಟಗಳಿಗೆ, ಮನಸ್ಸಿನ ನೋವು ದುಃಖಗಳಿಗೆ, ಬದುಕಿನ ನಿತ್ಯ ಸಮಸ್ಯೆಗಳಿಗೆ ಇರುವ ಪೂರ್ಣ ಪರಿಹಾರವೇ ಭಗವದ್ಗೀತೆ. ಇಂತಹ ಗೀತೆಯ ಕುರಿತಾಗಿ ಅದರ ಸಾರವನ್ನು ಗೀತ, ನೃತ್ಯ, ರೂಪಕದ ಮೂಲಕ ಎಲ್ಲರಿಗೂ ತಲುಪಿಸುವ ಒಂದು ವಿಶಿಷ್ಟ ಪ್ರಯತ್ನವನ್ನು ಶ್ರೀಶಾರದಾ ಸಂಗೀತ-ನೃತ್ಯ ವಿದ್ಯಾಲಯವು ಕುವೆಂಪು ರಂಗಮಂದಿರದಲ್ಲಿ ಮಾಡಿ ಯಶಸ್ವಿಯಾದರೆಂದೇ ಹೇಳಬಹುದು.

ಸರಿಯಾದ ಸಮಯಕ್ಕೆ ಆರಂಭವಾದ ಈ ಕಾರ್ಯಕ್ರಮ ಸಂಗೀತ ಗುರುಕುಲದ ದೃಶ್ಯದೊಂದಿಗೆ ಅಲ್ಲಿನ ಮಗುವೊಂದರ ತಲ್ಲಣಕ್ಕೆ, ಆತಂಕಕ್ಕೆ ಸಮಾಧಾನ ಮಾಡುವ ರೀತಿಯಲ್ಲಿ ಗೀತೋಪದೇಶವು ತೆರೆದುಕೊಳ್ಳುತ್ತಾ ಹೋಗುತ್ತದೆ. ಆ ಮಗುವಿಗೆ ಅರ್ಜುನನ ಖಾಯಿಲೆಯಿಂದ ಅರ್ಜುನ ಭಾವಕ್ಕೆ ವಿವೇಕಾನಂದರ ಸನ್ಯಾಸಿಗೀತೆ, ರೈತ ಗೀತೆ ಇವುಗಳಿಂದ ಬಹಳ ಚೆನ್ನಾಗಿ ತರುತ್ತಾರೆ. ಆನಂತರ ಎಲ್ಲದಕ್ಕೂ ಹರಿ ಇದ್ದಾನೆ ಎಂಬ ಹಾಡಾಗಿರಬಹುದು, ಕುರುಡು ಕಾಂಚಾಣದ ಹಾಡು ಹಾಗೂ ಅದಕ್ಕೆ ತಕ್ಕದಾದ ನೃತ್ಯ ಎಲ್ಲರ ಮನಸೆಳೆಯಿತು. ಮಧ್ಯದಲ್ಲಿ ವಾಲ್ಮೀಕಿ ಕುರಿತಾದ ರತ್ನಾಕರನ ಕಥೆ, ಅಲ್ಲಿನ ಪಾತ್ರಗಳೆಲ್ಲವೂ ಎಷ್ಟು ನಮ್ಮನ್ನು ಆವರಿಸುವಂತೆ ಮಾಡಿತೆಂದರೆ ಆ ನಾರದ, ರತ್ನಾಕರ ಅವನ ಕುಟುಂಬ ವಾಹ್! ಅದ್ಭುತ ಅಭಿನಯ. ನಂತರ ಪ್ರಹ್ಲಾದನ ಕಥೆ ಅಲ್ಲಿಯೂ ನಟನೆಯ ಬಗ್ಗೆ ಮಾತೇ ಇಲ್ಲ. ಅದಕ್ಕಿಂತಲೂ ಗುರುಭಕ್ತಿಯ ಶ್ರದ್ಧೆಯಲ್ಲಿ ನಮ್ಮನ್ನು ಕೊಂಡೊಯುವಲ್ಲಿ ಶ್ರೀ ಶಂಕರಾನಂದ ಜೋಯಿಸರಂತೂ ನಮಗೆ ಗುರುದರ್ಶನವೇ ಮಾಡಿಸಿಬಿಟ್ಟರು. ಶಬರಿಯ ಸನ್ನಿವೇಶದಲ್ಲಿ ಆ ಹಾಡಿಗೆ ಅವರ ಅಭಿನಯ ಹಾಗೂ ಹಿಂದಿನ ಪರದೆಯ ಗುಡಿಸಲ ಚಿತ್ರಣ ಅದೇನು ಅದ್ಬುತ ಅಂದರೆ ಪದಗಳಲ್ಲಿ ಕಟ್ಟಿಕೊಡಲು ಕಷ್ಟವೇ ಆಗಬಹುದೇನೋ. ಆದರೆ ಅಲ್ಲಿ ಬಂದ ಬಾಲರಾಮ ಅದು ಶಬರಿಯ ಕಲ್ಪನೆಯ ರಾಮ ಎಂಬುದನ್ನು ನಾವು ಭಾವಿಸಬಹುದು. ನಂತರದ ಮುಂದಿನ ಹಾಡಾದ ಮುಳ್ಳು ಕೊನೆಮೇಲೆ ಮೂರು ಕೆರೆಯ ಕಟ್ಟೆ… ಹಾಡು ಬಹಳ ಸಾಂದರ್ಭಿಕ ಹಾಗೂ ಸತ್ವ ರಜೋತಮಗಳ ಕುರಿತಾಗಿ ಕಟ್ಟಿಕೊಡುವ ಗೀತೆಯಾಗಿ ಮೂಡಿ ಬಂದಿತು.

Klive Special Article ವಿಶ್ವರೂಪ ದರ್ಶನದ ಸಂದರ್ಭದಲ್ಲಿ ಹಾಡಿದ ಆತ್ಮನೂ ನೀನೇ ಪರಮಾತ್ಮನೂ ನೀನೆ ಹಾಡು ಮತ್ತು ಅದಕ್ಕೆ ಸಂಯೋಜಿಸಿದ ದೃಶ್ಯ ನಿಜವಾಗಿಯೂ ವಿಶ್ವರೂಪದ ದರ್ಶನವೇ ಆಯಿತು. ಹೀಗೆ ಸಾಗಿ ಬಂದು ನಿಂತಿದ್ದು ಕೊನೆಗೆ ಉತ್ತಿಷ್ಟತ ಜಾಗ್ರತ ಎಂಬ ಹಾಡಿಗೆ. ಒಟ್ಟಿನಲ್ಲಿ ಬಳಸಿದ ಹಾಡು, ಮೂಡಿ ಬಂದ ದೃಶ್ಯ ಹಾಗೂ ನೃತ್ಯಗಳು ಎಲ್ಲವೂ ಅತ್ಯದ್ಭುತವಾಗಿತ್ತು. ಅಲ್ಲಿದ್ದ ಎಲ್ಲರ ಹೃದಯದಲ್ಲೂ ಅರ್ಜುನ ಭಾವ ಜಾಗ್ರತವಾಗಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ ಅನೇಕ ಸಂಗತಿಗಳನ್ನು ಬಹಳ ಸರಳವಾಗಿ ಗೀತಾಮೃತದ ಸಾರ ಉಣಬಡಿಸಿದ ವಿದ್ವಾನ್ ಅರುಣ್ ಕುಮಾರ್ ಹಾಗೂ ಶ್ರೀಮತಿ ವೀಣಾ ಅರುಣ್ ಕುಮಾರ್ ಅವರ ತಂಡಕ್ಕೆ ನಗರದ ಸಂಗೀತ ನೃತ್ಯ ಆಸಕ್ತರ ಪರವಾಗಿ ಅನಂತ ಅನಂತ ಧನ್ಯವಾದಗಳು.

ಇದರಲ್ಲಿ ಬಂದ ಕೆಲವು ಸಂಭಾಷಣೆಗಳಾದ-‘ ಮೌನ ಮಾತಾದಾಗ ಭಕ್ತಿ ಭಾವವಾಗುತ್ತದ’, ‘ಕಣ್ಣಿಗೆ ಕಾಣುವುದು ಕ್ಷೇತ್ರ ನೋಡುವವನು ಕ್ಷೇತ್ರಜ್ಞ’. ಆಸಕ್ತಿ ಹುಟ್ಟುವುದು ನಮ್ಮ ನಮ್ಮ ಗುಣಗಳಿಂದ ಎಂದು ಹೇಳಿ ಸಾತ್ವಿಕತೆ ಹೆಚ್ಚಿದರೆ ಸದ್ವಿದ್ಯೆ. ಕಳ್ಳ ಹಾಗೂ ಮೋಸಗಾರ ಎಲ್ಲರಿಗೂ ಸಹ ಸಾಧನೆ ಅನ್ವಯಿಸುತ್ತೆ ಆದರೆ ಸಮಾಜ ಒಪ್ಪುವಂತಹ ನ್ಯಾಯ ಸಮ್ಮತವಾದ ಗೌರವ ಗಳಿಸುವ ಸಾಧನೆಗೆ ಮಾತ್ರ ಬೆಲೆ ಇರುತ್ತದೆ. ಅದಕ್ಕೆ ಒಳ್ಳೆಯ ಗುರು ವಾತಾವರಣ ಜೊತೆಗೆ ಆಹಾರವು ಅವಶ್ಯಕ ಆ ಆಹಾರ ಮನಸ್ಸು ಮತ್ತು ಬುದ್ಧಿಗಳನ್ನು ನಿಯಂತ್ರಿಸುತ್ತೆ. ‘ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ’ ಎನ್ನುವ ಈ ಶ್ಲೋಕದಲ್ಲಿ ದುರ್ಯೋಧನನ ಮಾತು ಉದಾಹರಿಸಿ ಎಲ್ಲದಕ್ಕೂ ಮನಸ್ಸೇ ಕಾರಣ ಅಂತಹ ಮನೋ ನಿಯಂತ್ರಣ ಆಹಾರ ಹಾಗೂ ಉಸಿರಾಟದಿಂದ ಸಾಧ್ಯ ಎಂದು ಹೇಳಿ ‘ಶ್ರದ್ಧಾವಾನ್ ಲಭತೇ ಜ್ಞಾನಮ್’ ಎಂದು ಹೇಳಿ ಇಲ್ಲಿ ಓದಲು ಆಗದೆ ಇರುವಾಗ ನಿಜ ಗುರುವಿಗೆ ಶರಣಾಗಬೇಕು. ಆಗ ಅಹಂಕಾರ ನಾಶವಾಗಿ ಉನ್ನತ ವಿಚಾರಕ್ಕೆ ನಾಂದಿ ಆಗುತ್ತದೆ. ಒಳಿತನ್ನು ಬಯಸುತ್ತಾ ವೃತ್ತಿ, ಪ್ರವೃತ್ತಿ ಮಾಡುತ್ತಾ ಹೋದರೆ ಅದೇ ಜೀವನದ ಸಫಲತೆ ಎಂದು ಹೇಳುವ ಎಲ್ಲ ಮಾತುಗಳು ಮನಸ್ಸಿನಾಳಕ್ಕೆ ಇಳಿದು ನಮ್ಮರಿವಿನ ಜಾಗ್ರತಿ ಆಯಿತು.

ಬೆಳಕಿನ ನಿರ್ವಹಣೆಯಲ್ಲಿ ಶ್ರೀ ಮಂಜುನಾಥ ಕೂದುವಳ್ಳಿ, ಧ್ವನಿಯಲ್ಲಿ ವೀರಭದ್ರ ಸೌಂಡ್ ಸಿಸ್ಟಮ್ ನವರ ಕಾರ್ಯ ಉತ್ತಮ. AI ಚಿತ್ರಗಳಂತೂ ಎಲ್ಇಡಿ ವಾಲ್‌ನಲ್ಲಿ ಒಂದಾದ ಮೇಲೊಂದು ಬಹಳ ಅಚ್ಚುಕಟ್ಟಾಗಿ ಕಂಡುಬಂದವು

ಒಟ್ಟಿನಲ್ಲಿ ಹೇಳಬೇಕೆಂದರೆ ಶಿವಮೊಗ್ಗದ ಜನತೆಗೆ ಈ ಬಾರಿ ಭಗವದ್ಗೀತೆಯ ಸವಿ ಸ್ವರ್ಣವಲ್ಲಿ ಮಠದವರ ಗೀತಾ ಅಭಿಯಾನದ ಮಹಾ ಸಮರ್ಪಣೆ ಕಳೆದ ಕೆಲವೇ ದಿನಗಳಲ್ಲಿ ಆಯೋಜಿತವಾಗಿ ಜನರಲ್ಲಿ ಮಾನವನಿಂದ ಮಾಧವನೆಡೆಗೆ ಕೊಂಡೊಯ್ಯಲು ಮೆಟ್ಟಿಲಾದಂತೆ ಆಯ್ತೆನ್ನುವುದಂತೂ ನಿಜ. ಈ ನಿಟ್ಟಿನಲ್ಲಿ ಇಲ್ಲಿಯ ಜನ ಪುಣ್ಯವಂತರೇ ಹೌದು.

ಕುವೆಂಪು ರಂಗಮಂದಿರದಲ್ಲಿ ಕಿಕ್ಕಿರಿದ ಜನರೇ ಅಲ್ಲದೆ ಗಣ್ಯರಾದ ಕೆಎಸ್ ಈಶ್ವರಪ್ಪನವರ ಕುಟುಂಬ ಹಾಗೂ ಶಾಸಕರಾದ ಚೆನ್ನಿಯವರು ಹಾಗೂ ಡಾ. ಪಿ. ನಾರಾಯಣ್ ರವರೇ ಮೊದಲಾದ ಎಲ್ಲರೂ ಈ ಕಾರ್ಯಕ್ರಮವನ್ನು ಪೂರ್ಣ ಆಸ್ವಾದಿಸಿದ್ದು ಸಹ ಒಂದು ವಿಶೇಷವೆನಿಸಿತು ಹಾಗಾಗಿ ಆ ಮಟ್ಟಿಗಿನ ಒಂದು ಯಶಸ್ವಿ ಕಾರ್ಯಕ್ರಮ ಇದಾಗಿತ್ತು. ಅತ್ಯಂತ ಆಕರ್ಷಕ ಹಾಗೂ ವಿನೂತನ ರಂಗ ಪ್ರಯೋಗವಾಗಿ ಗೀತೆಯ ಹದಿನೆಂಟು ಅಧ್ಯಾಯಗಳ ಮೌಲ್ಯಗಳು ಹಾಗೆಯೇ ಕರ್ಮ ಜ್ಞಾನ ಭಕ್ತಿಯ ಬೆಳಕಾಗಿ ಬದುಕನ್ನು ಬೆಳಗಿಸುವ ಮಹಾಶಕ್ತಿ ಎಂಬುದರ ಅರಿವಾಯಿತು.

ಡಾ. ಮೈತ್ರೇಯಿ ಆದಿತ್ಯ
ಉಪನ್ಯಾಸಕರು ಪೇಸ್ ಪಿಯು ಕಾಲೇಜ್.
ಚಿತ್ರ ಕೃಪೆ : ಆದಿತ್ಯಪ್ರಸಾದ್ ಎಂ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...