Lok Adalats ದಿನಾಂಕ 13-12-2025 ರಂದು ಈ ವರ್ಷದ ನಾಲ್ಕನೇ ರಾಷ್ಟ್ರೀಯ ಲೋಕ ಅದಾಲತನ್ನು ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಏರ್ಪಡಿಸಲಾಗಿದ್ದು ಅದರ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರವನ್ನು ಉದ್ದೇಶಿಸಿ ದಿನಾಂಕ 18-10-2025 ರಂದು ಪತ್ರದ ಮುಖೇನ ಕರ್ನಾಟಕ ರಾಜ್ಯದಲ್ಲಿ ಬಾಕಿ ಉಳಿದಿರುವ ಟ್ರಾಫಿಕ್ ಈ ಚಲನ ಪ್ರಕರಣಗಳ ಪಾವತಿಗೆ ಶೇಕಡ 50ರಷ್ಟು ರಿಯಾಯಿತಿಯನ್ನು ನಿಗದಿಪಡಿಸುವುದಕ್ಕೆ ಕೋರಿಕೊಂಡ ಮೇರೆಗೆ ಕರ್ನಾಟಕ ಸರ್ಕಾರವು ಆ ಪತ್ರವನ್ನು ಪರಿಶೀಲಿಸಿ ದಂಡದ ಮೊತ್ತ ಪಾವತಿ ಬಾಕಿ ಇರುವ ಪ್ರಕರಣಗಳನ್ನು ಗಮನದಲ್ಲಿರಿಸಿಕೊಂಡು ಪೊಲೀಸ್ ಇಲಾಖೆಯ ಸಂಚಾರಿ ಈ ಚಲನ್ನಲ್ಲಿ ದಾಖಲಾಗಿರುವ ದಂಡದ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20 ಅವಧಿಯಲ್ಲಿ ದಾಖಲಾಗಿ, ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ದಿನಾಂಕ 21-11-2025 ರಿಂದ ದಿನಾಂಕ 12-12-2025 ರವರೆಗೆ ಕಾಲಾವಕಾಶ ನೀಡಿ ಸಾರಿಗೆ ಇಲಾಖೆಯಿಂದ ಆದೇಶವನ್ನು ಹೊರಡಿಸಿ ಅದಕ್ಕೆ ಆರ್ಥಿಕ ಇಲಾಖೆಯ ಸಹಮತಿಯನ್ನು ಸಹ ಸೂಚಿಸಿ ಅಧಿಸೂಚನೆಯನ್ನು ಹೊರಡಿಸಿದೆ.
ಆದ್ದರಿಂದ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ ಚಲನ್ ನಲ್ಲಿ ದಾಖಲಾದ ದಂಡದ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2019 ಅವಧಿಯಲ್ಲಿ ದಾಖಲಾಗಿರುವ ಮತ್ತು ಪಾವತಿಗೆ ಬಾಕಿ ಇರುವ ಪ್ರಕರಣಗಳಲ್ಲಿ ದಂಡದ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿ ಹೊರಡಿಸಲಾದ ಆದೇಶದ ಸದುಪಯೋಗವನ್ನು ಮತ್ತು ಅಧಿಕ ಲಾಭವನ್ನು ಅಂತಹ ದಂಡದ ಮೊತ್ತವನ್ನು ದಿನಾಂಕ 12.12.2025ರ ಒಳಗೆ ಸಂಬಂಧಪಟ್ಟ ಇಲಾಖೆ ಕಛೇರಿಯಲ್ಲಿ ಪಾವತಿಸಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆದೇಶದ ಲಾಭವನ್ನು ಪಡೆಯಬೇಕೆಂದು ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಶ್ರೀ ಸಂತೋಷ್ ಎಂ. ಎಸ್., ರವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.
